ಹಿರಿಯೂರು :
ನಗರದ ಶ್ರೀಶೈಲ ವೃತ್ತದಲ್ಲಿರುವ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್ 25 ಸಾವಿರಕ್ಕೂ ಹೆಚ್ಚು ಮೌಲ್ಯದ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡು, ಅಂಗಡಿ ಮಾಲೀಕರಿಗೆ 2ಸಾವಿರ ದಂಡ ವಿಧಿಸಿದ್ದಾರೆ.
ಅಂಗಡಿಮೇಲೆ ಪ್ರಥಮ ಬಾರಿಗೆ ದಾಳಿ ನಡೆಸಿರುವ ಕಾರಣ ಕಡಿಮೆ ದಂಡ ಹಾಕಲಾಗಿದೆ. ಇದೇ ಪ್ರವೃತ್ತಿ ಮುಂದುವರಿದಲ್ಲಿ ದಂಡದ ಪ್ರಮಾಣ ಹೆಚ್ಚಿಸಲಾಗುತ್ತದೆ. ಅಲ್ಲದೆ ಪರವಾನಗಿ ರದ್ದು ಪಡಿಸಲಾಗುತ್ತದೆ ಎಂಬುದಾಗಿ ಅವರು ಎಚ್ಚರಿಕೆ ನೀಡಿದರು.
ನಗರದಲ್ಲಿ ಪ್ಲಾಸ್ಟಿಕ್ ವಸ್ತುಮಾರಾಟ ಮಾಡದಂತೆ ಜಾಥಾ, ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದ್ದರೂ ಮಾರಾಟ ಪೂರ್ಣ ಪ್ರಮಾಣದಲ್ಲಿ ನಿಲ್ಲದೇ ಇರುವುದು ಬೇಸರದ ಸಂಗತಿ. ಕಾನೂನಿನ ಮೂಲಕವೇ ಎಲ್ಲವನ್ನು ಸರಿಮಾಡುವುದು ಬೇಡ ಎಂಬ ಕಾರಣಕ್ಕೆ ವರ್ತಕರಿಗೆ ಸಹಾನುಭೂತಿಯಿಂದ ಹೇಳಿದ್ದೆವು. ಹೀಗಿದ್ದೂ ವ್ಯಾಪಾರದ ನೆಪದಲ್ಲಿ ಪರಿಸರಕ್ಕೆ ಹಾನಿ ಮಾಡಲು ಮುಂದಾದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮಹಂತೇಶ್ ಖಡಕ್ ಸೂಚನೆ ನೀಡಿದರು.
ಪ್ಲಾಸ್ಟಿಕ್ ಸಾಮಗ್ರಿಗಳನ್ನು ನಗರಸಭೆ ವಶಕ್ಕೆ ಪಡೆದಿದ್ದೇವೆ. ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಬಗ್ಗೆ ನಾಗರೀಕರು ಮಾಹಿತಿ ಕೊಟ್ಟಲ್ಲಿ ಕಾನೂನುಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
