27 ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಸ್ಪರ್ಧೆ

ದಾವಣಗೆರೆ:

     ರಾಜ್ಯದ ಬಳ್ಳಾರಿ ಹೊರತುಪಡಿಸಿ, ರಾಜ್ಯದ 27 ಕ್ಷೇತ್ರಗಳಲ್ಲೂ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಮತದಾರರು ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಮನವಿ ಮಾಡಿದರು.

      ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಎಂಬುದು ವ್ಯಾಪಾರೀಕರಣಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಜಾಕೀಯ ಎಂಬುದು ರಾಜಕೀಯಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ವ್ಯವಸ್ಥೆ ಬದಲಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕೊಂದಿಷ್ಟು ಸಮಯ ಬೇಕಾದರೂ ಇಲ್ಲಿಂದ ಒಂದು ಸಂದೇಶ ಹೋಗಬೇಕು. ಆದ್ದರಿಂದ ನೋಟಾ ಒತ್ತುವ ಬದಲು ಆಟೋ ರಿಕ್ಷಾಗೆ ಮತ ಹಾಕಿದರೆ ಎಷ್ಟೋ ಅನುಕೂಲವಾಗುತ್ತದೆ ಎಂದರು.

      ಎದುರಾಳಿ ಪಕ್ಷಗಳ ಯಾರನ್ನೂ ನಾವು ದೂಷಿಸುವುದಿಲ್ಲ. ನಾವೇನು ಮಾಡುತ್ತೇವೆ? ಎಂಬುದನ್ನಷ್ಟೇ ಜನರ ಮುಂದಿಡುತ್ತೇವೆ. ಹಣವಿದ್ದವರು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬ ಮನೋಭಾವ ತೊಡೆದು ಹಾಕಿ, ಜನಸಾಮಾನ್ಯರೂ ಆಡಳಿತ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂಬುದು ನಮ್ಮ ಆಶಯ. ವ್ಯವಸ್ಥೆಯಲ್ಲಿ ಬದಲಾವಣೆ ಬಯಸುವ ಜನರಿಗಾಗಿ ವೇದಿಕೆ ಒದಗಿಸಲು ಹೊಸ ಪಕ್ಷ ಕಟ್ಟಿದ್ದೇವೆ. ಯುವಜನರ ಮೇಲಿನ ನಂಬಿಕೆಯಿಂದ ಸಕಾರಾತ್ಮಕವಾಗಿ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.

      ಚುನಾವಣೆ ಆಯೋಗ 70 ಲಕ್ಷ ವೆಚ್ಚ ಮಿತಿ ಹೇರಿದ್ದರೆ, ನಮ್ಮ ಅಭ್ಯರ್ಥಿಗಳು 30-40 ಸಾವಿರ ರೂ. ಮಾತ್ರ ಚುನಾವಣೆಗಾಗಿ ಖರ್ಚು ಮಾಡುತ್ತಿದ್ದಾರೆ. ಕೆಲ ಕರಪತ್ರ ಮುದ್ರಣ ಹಾಗೂ ಉಮೇದುವಾರಿಕೆ ಠೇವಣಿ ಹೊರತುಪಡಿಸಿ ಇನ್ಯಾವುದಕ್ಕೂ ಹಣ ಖರ್ಚು ಮಾಡದಂತೆ ಸೂಚನೆ ನೀಡಿದ್ದೇನೆ ಎಂದರು.

       ಇಂದು ಶೇ.20ರಷ್ಟು ಜನರ ಕೈಯಲ್ಲಿ ಆಡಳಿತ ವ್ಯವಸ್ಥೆ ನಲುಗಿ ಹೋಗಿದೆ. ಎಲ್ಲಾ ರಾಜಕೀಯ ಪಕ್ಷಗಳ ಚುನಾವಣೆ ಪ್ರಣಾಳಿಕೆಯೂ ಸುಳ್ಳಿನ ಕಂತೆಯಾಗಿದೆ. ಹಾಗಾಗಿ ನಾವು ಯಾವುದೇ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಜನರಿಗೆ ಏನು ಆಗಬೇಕು? ಎಂಬುದನ್ನು ಜನರಿಂದಲೇ ಕೇಳುತ್ತಿದ್ದೇವೆ. ಕಾಲಮಿತಿಯೊಳಗೆ ಭರವಸೆ ಈಡೇರಿಸದಿದ್ದರೆ ಅಧಿಕಾರದಿಂದ ಕೆಳಗಿಳಿಯುವುದಾಗಿ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.

       ಮಂಡ್ಯ ಚುನಾವಣೆ ವಿಚಾರವಾಗಿ ಏನನ್ನೂ ಹೇಳುವುದಿಲ್ಲ. ನಾವೊಂದಿಷ್ಟು ಒಳ್ಳೆಯ ವಿಚಾರಗಳನ್ನಿಟ್ಟುಕೊಂಡು ಜನರ ಮುಂದೆ ಬಂದಿದ್ದೇವೆ. ಮಂಡ್ಯ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಯನ್ನು ಹಾಕಿದ್ದೇವೆ. ವಿಚಾರಗಳನ್ನು ನೋಡದೆ, ಸಿನಿಮಾದವರನ್ನು ಗೆಲ್ಲಿಸುವುದು ಅಥವಾ ಸಿನಿಮಾದವರ ಪ್ರಚಾರಕ್ಕೆ ಮರುಳಾಗುವುದು ಸ್ವಂತಿಕೆ ಇಲ್ಲದವರು ಮಾಡುವ ಕೆಲಸ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎ.ಗಣೇಶ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link