ಹಿರಿಯೂರು :
ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದತ್ತ ಹೆಚ್ಚಿನ ಗಮನ ನೀಡಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಪೂಜಾರ್ ಕರೆ ನೀಡಿದರು.
ನಗರದ ಎಚ್.ಆರ್.ಕೆ ಕಾಮರ್ಸ್ ಅಕಾಡೆಮಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಮ್ಮಂದಿರ ದಿನಾಚರಣೆ ಹಾಗೂ ಕಾರ್ಮಿಕದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಬಿವಿಪಿ ಸಂಚಾಲಕ ಎಚ್.ಆರ್.ಯೋಗೇಶ್ ಮಾತನಾಡಿ, ವರ್ಷ ಪೂರ್ತಿ ಓದುವ ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆನ್ನು ಎದುರಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.ಉಪನ್ಯಾಸಕ ಶಿವಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾವಧಾನ ಮತ್ತು ಸಮಾಧಾನ ಮನೋಭಾವ ಇರಬೇಕು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ತಂದೆ-ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಎಚ್.ಆರ್.ಕೆ.ಕಾಮರ್ಸ್ ಅಕಾಡೆಮಿ ಮುಖ್ಯಸ್ಥ ರಜನಿಕಾಂತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುರಕ್ಷಾ, ಪಲ್ಲವಿ, ಸಿದ್ದೇಶ್, ಬಾಲಾಜಿ, ಕಿರಣ್, ಯೋಗೇಶ್, ವಚನದೀಪ್ತಿಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಟಿ.ವೆಂಕಟೇಶ್, ಎಚ್.ಎಂ.ಶಿವಪ್ರಸಾದ್, ಮಧುಮಾಲ, ಆರ್.ಶಿವಪ್ರಸಾದ್, ಲೋಕೇಶ್, ಎ.ಎಂ.ಎಸ್.ಕಂಪ್ಯೂಟರ್ಸ್ ಮಾಲೀಕ ಮುರಳಿ, ಎಂ.ರವೀಂದ್ರನಾಥ್, ಗೋವಿಂದರಾಜ್, ಇತರರು ಭಾಗವಹಿಸಿದ್ದರು.