ರಾಯಚೂರು:
ರಾಜ್ಯದ ಗಮನ ಸೆಳೆದಿದ್ದ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಈಗ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಹೌದು, ಮರಣೋತ್ತರ ಪರೀಕ್ಷೆಯ ವರದಿ ಸಿಐಡಿ ಅಧಿಕಾರಿಗಳ ಕೈಸೇರಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಆಕೆಯನ್ನು ಕೊಲೆ ಮಾಡಿಲ್ಲ ಎಂಬುದು ಗೊತ್ತಾಗಿದೆ.
ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡು 3 ದಿನಗಳ ಬಳಿಕ ದೇಹ ಕಪ್ಪು ಬಣ್ಣಕ್ಕೆ ತಿರುಗಿತ್ತು. ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಗುರುತು ಇದೆ. ಆದರೆ, ನೇಣಿನ ಕುಣಿಕೆ ಒತ್ತಿರುವುದರಿಂದ ಆ ರೀತಿ ಆಗಿದ್ದು, ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತು ಪತ್ತೆಯಾಗಿಲ್ಲ. ಲೈಂಗಿಕ ದೌರ್ಜನ್ಯದ ಕುರುಹುಗಳು ಕೂಡ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎನ್ನಲಾಗಿದೆ.
ಈ ಸಂಬಂಧ ಸಿಐಡಿ ಕಸ್ಟಡಿಯಲ್ಲಿ ಒಂಭತ್ತು ದಿನಗಳ ಕಾಲ ವಿಚಾರಣೆಗೆ ಒಳಪಟ್ಟ ಸುದರ್ಶನ್ ಯಾದವ್ ಹಲವಾರು ವಿಚಾರಗಳನ್ನ ಬಾಯಿಬಿಟ್ಟಿದ್ದಾನೆ. ವಿದ್ಯಾರ್ಥಿನಿ ಹಾಗೂ ಸುದರ್ಶನ್ ನಡುವೆ ಅನೇಕ ವರ್ಷಗಳಿಂದ ಸ್ನೇಹವಿತ್ತು. ಆದರೆ, ಅದನ್ನು ತಪ್ಪಾಗಿ ಭಾವಿಸಿದ್ದ ಆತ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದು, ವಿದ್ಯಾರ್ಥಿನಿ ಒಪ್ಪದಿದ್ದಾಗ ಗಲಾಟೆ ಮಾಡಿದ್ದ. ಏಪ್ರಿಲ್ 13 ರಂದು ಆಕೆ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಸುದರ್ಶನ್ ಜಗಳವಾಡಿದ್ದ. ವಿದ್ಯಾರ್ಥಿನಿ ಮೇಲೆ ಸಂಶಯಪಟ್ಟು ಕಿರುಕುಳ ಸಹ ನೀಡಿದ್ದನು. ಇದರಿಂದ ಮನನೊಂದು ವಿದ್ಯಾರ್ಥಿನಿ ಸಾವಿನ ನಿರ್ಧಾರಕ್ಕೆ ಹೋಗಿರಬಹುದು ಎನ್ನಲಾಗಿದೆ.
ಬಳಿಕ ಮನೆಯವರ ಸಂಪರ್ಕಕ್ಕೆ ಸಿಗದ ವಿದ್ಯಾರ್ಥಿನಿ 3 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಮರಣೋತ್ತರ ಪರೀಕ್ಷೆ ವರದಿ ಸಿಐಡಿ ಕೈ ಸೇರಿದ್ದು, ವಿದ್ಯಾರ್ಥಿನಿ ಸಾವಿನ ಕುರಿತಾಗಿ ತನಿಖೆ ಮುಂದುವರೆದಿದೆ ಎಂದು ಹೇಳಲಾಗಿದೆ.
ನಗರದ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ (23) ಅನುಮಾನಾಸ್ಪದ ಸಾವಿನ್ನಪ್ಪಿದ್ದಳು. ಇದನ್ನು ಕಂಡ ಕೆಲವರು ಯಾರೋ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಭಾರೀ ಹೋರಾಟ ನಡೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/SudarshanYadav00-madhu.gif)