ಚಿತ್ರದುರ್ಗ:
ಪುರಾತನ ಕಾಲದ ಹಸ್ತ, ಅಂಗುಲ, ಕೋಲು ಅಳತೆಯ ಪ್ರಮಾಣದಲ್ಲಿ ವಿಶೇಷವಾಗಿ ಕೇರಳ ಶೈಲಿಯಲ್ಲಿ ನಿರ್ಮಾಣವಾಗಿರುವ ರಾಜರಾಜೇಶ್ವರಿ ದೇವರುಗಳ ಪ್ರತಿಷ್ಟಾಪನಾ ಮಹೋತ್ಸವ ಮೇ.25 ರಿಂದ 29 ರವರೆಗೆ ಐದು ದಿನಗಳ ಕಾಲ ಗೋನೂರು ಗ್ರಾಮ ಮುತ್ತಯ್ಯನಹಟ್ಟಿಯಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷ ನಾಗರಾಜ್ಭಟ್ ತಿಳಿಸಿದರು.
ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀಸೂರ್ಯ, ಗಣಪತಿ, ಶಿವ, ವಿಷ್ಣು ಸಹಿತ ರಾಜರಾಜೇಶ್ವರಿ ದೇವರುಗಳ ಪ್ರತಿಷ್ಟಾಪನೆ ಹಾಗೂ ಚಂಡಿಕಾ ಮಹಾಯಾಗ ನೆರವೇರಲಿದೆ. ಆದಿಷ್ಟಾನ ಪೀಠ, ನಿಧಿ ಕಳಸ, ಪದ್ಮ, ಕೂರ್ಮ, ಯೋಗನಾಳ, ಯಂತ್ರ ಸ್ಥಾಪನೆ ನಂತರ ಪಾಣಿಪೀಠದ ಮೇಲೆ ದೇವರನ್ನು ಇರಿಸಲಾಗುವುದು. ರಾಜರಾಜೇಶ್ವರಿ ಮಧ್ಯದಲ್ಲಿ ಪ್ರಧಾನವಾಗಿ ಆರಾಧಿಸುತ್ತಾಳೆ.
ಒಂದು ಕೈಯಲ್ಲಿ ಪಾಷಾಂಕುಶ, ಮತ್ತೊಂದು ಕೈಯಲ್ಲಿ ಕಬ್ಬಿನ ಜಲ್ಲೆ, ಬಲಗೈಯಲ್ಲಿ ಪಂಚಪುಷ್ಪ ಬಾಣ, ಚಂದ್ರನನ್ನು ತಲೆಯಲ್ಲಿ ಧರಿಸಿರುವ ರಾಜರಾಜೇಶ್ವರಿಗೆ ವಿಶೇಷ ಯಜ್ಞ, ಶತಚಂಡಿಕಾ ಯಾಗ ನಡೆಯಲಿದೆ ಎಂದು ಹೇಳಿದರು.
2018 ಫೆ. 19 ಕ್ಕೆ ಆರಂಭಗೊಂಡ ಈ ದೇವಸ್ಥಾನಕ್ಕೆ ಇಲ್ಲಿಯವರೆಗೂ ಅಂದಾಜು ಎರಡುವರೆ ಕೋಟಿ ರೂ.ಗಳಷ್ಟು ಖರ್ಚಾಗಿದೆ. ಇನ್ನು ರಾಜಗೋಪುರ, ಚಂದ್ರಶಾಲೆ ಆರಂಭವಾಗಬೇಕಿದೆ. ಈ ದೇವಸ್ಥಾನ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿಯ ಭಕ್ತರಿದ್ದಾರೆ. ಸಲಹಾ ಸಮಿತಿ ರಚಿಸಿಕೊಂಡು ಸಮಸ್ತ ಭಕ್ತರ ನೆರವಿನೊಂದಿಗೆ ಆರಂಭಿಸಿದ್ದೇವೆ. 25 ರಂದು ಬೆಳಿಗ್ಗೆ 7-30 ರಿಂದ ದೇವತಾ ಪ್ರಾರ್ಥನೆ, ಫಲ ಸಮರ್ಪಣೆ, ಗುರುವಂದನೆ, ಗಣಪತಿ ಪೂಜೆ, ಪುಣ್ಯಾಹ, ನಾಂಧೀ ಗಂಗಾಪೂಜೆ, ಮಹಾಸಂಕಲ್ಪ, ಕೃಚ್ಟ್ರಾಚರಣೆ, ಮಧುಪರ್ಕ, ಕೌತುಕ ಬಂಧನ ನಡೆಯಲಿದೆ.
26 ರಂದು ಬೆಳಿಗ್ಗೆ 7-30 ರಿಂದ ಪುಣ್ಯಾಹ ಬಿಂಬಿಶುದ್ದಿ, ಕಳಸ ಸ್ಥಾಪನೆ, ಬಿಂಬಿ ಶುದ್ದಿ ಹವನ, ಅಕ್ಷತ ಹೋಮ, ಬಿಂಬ ಜಲಾಧಿವಾಸ, ಕಲಶಾಭಿಷೇಕ, ಮಂಟಪ ಪ್ರತಿಷ್ಟೆ, ಅರಣಿಮಥನ ನೆರವೇರಲಿದೆ.27 ರಂದು ಬೆಳಿಗ್ಗೆ 7-30 ರಿಂದ ಪುಣ್ಯಾಹ ಗೋದೋಹನ ನಿರೀಕ್ಷಣ,
28 ರಂದು ಬೆಳಿಗ್ಗೆ 7-30 ರಿಂದ ಪುಣ್ಯಾಹ ರಾಜರಾಜೇಶ್ವರಿ ದೇವರಿಗೆ 109 ಬ್ರಹ್ಮ ಕಳಶ ಸ್ಥಾಪನೆ.
ಮಧ್ಯಾಹ್ನ ಒಂದು ಗಂಟೆಗೆ ಧರ್ಮಸಭೆ.
29 ರಂದು ಬೆಳಿಗ್ಗೆ 7-30 ರಿಂದ ಶತಚಂಡಿ ಹವನ, ಪಂಚದಶಿ ಮಂತ್ರ ಹವನ, ರಾಜರಾಜೇಶ್ವರಿ ದೇವರಿಗೆ ನವಾರ್ಣವ ಶ್ರೀಚಕ್ರ ಪೂಜೆ ನಡೆಯಲಿದೆ.ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ, ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಪಾದಂಗಳವರು, ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿಗಳು ಪಂಚ ಬ್ರಹ್ಮ ದೇವರುಗಳ ಪ್ರತಿಷ್ಟಾಪನಾ ಮಹೋತ್ಸವದ ಸಾನಿಧ್ಯ ವಹಿಸುವರು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ಬಿ.ಎನ್.ಚಂದ್ರಪ್ಪ, ವಿ.ಆರ್.ಎಲ್.ಸಮೂಹ ಸಂಸ್ಥೆ ಅಧ್ಯಕ್ಷ ವಿಜಯ ಸಂಕೇಶ್ವರ್ , ಕೆ.ಪಿ.ಎಸ್.ಸಿ.ನಿವೃತ್ತ ಚೇರ್ಮನ್ ಡಾ.ಟಿ.ಶಾಂಭಟ್ಟರು, ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ತಾ.ಪಂ.ಅಧ್ಯಕ್ಷ ಡಿ.ಎಂ.ಲಿಂಗರಾಜು, ಸದಸ್ಯೆ ಚಂದ್ರಕಲಾ, ಗೋನೂರು ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಐದು ದಿನಗಳ ಕಾಲ ಮಧ್ಯಾಹ್ನ ಅನ್ನಸಂತರ್ಪಣೆಯಿರುತ್ತದೆ. ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐದು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನಾಗರಾಜ್ಭಟ್ ಮನವಿ ಮಾಡಿದರು. ಮಾರುತಿಮೋಹನ್, ಶ್ರೀನಾಥ್ಬೇದ್ರೆ, ಸುರೇಶ್ಬಾಬು, ಎ.ಶೇಷಗಿರಿರಾವ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








