ಮೋಕ್ಷ ರಥ ಲೋಕಾರ್ಪಣೆ..!!

ಬ್ಯಾಡಗಿ:

     ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತನಾದರೇ ಇಡೀ ಗ್ರಾಮವೇ ಸೇರಿಕೊಂಡು ಮರಣಾನಂತರದ ಕರ್ಮ ಕ್ರಿಯಾಧಿಗಳನ್ನು ನಡೆಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾರ್ಥಿ ಮನುಷ್ಯನ ಯಾಂತ್ರಿಕ ಬದುಕು ಶವ ಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಮಯವಿಲ್ಲದಂತಾಗಿದ್ದು ದುರದೃಷ್ಟಕರ, ಪಟ್ಟಣದ ಪ್ರದೇಶದಲ್ಲಂತೂ ಇಂತಹವರ ಪ್ರಮಾಣ ಇನ್ನೂ ಹೆಚ್ಚಾಗಿದ್ದು ಹೀಗಾಗಿ ಮೃತದೇಹವನ್ನು ಸಾಗಿಸಲು ‘ಮೋಕ್ಷ ರಥ’ ಎಂಬ ವಾಹನವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುತ್ತಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.

       ಸ್ಥಳೀಯ ವರ್ತಕರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ‘ಮೋಕ್ಷ ವಾಹಿನಿ’ ವಾಹನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಬಳಿಕ ಮಾತನಾಡಿದ ಅವರು, ಮೃತರಾದ ಬಳಿಕ ನಮ್ಮ ಶವ ಸಂಸ್ಕಾರ ಹೀಗೆ ಆಗಬೇಕೆಂಬ ಬಯಕೆ ಯಾರಿಗೂ ಇರುವುದಿಲ್ಲ, ಆದರೆ ವರ್ತಕರ ಸಂಘದ ವತಿಯಿಂದ ನಿರ್ಮಿಸಲಾದ ಮುಕ್ತಿಧಾಮವನ್ನೊಮ್ಮೆ ನೋಡಿದರೇ ಎಂಥಹವರು ನನ್ನ ಅಂತ್ಯಕ್ರಿಯೆ ಇಲ್ಲಿಯೇ ಆಗಬೇಕೆಂದು ಎನ್ನುವಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಲಾಗಿದ್ದು ಇದೀಗ ಮೃತ ದೇಹವನ್ನು ಮೆರವಣಿಗೆ ಮೂಲಕ ಸಾಗಿಸಲು ಮೋಕ್ಷ ವಾಹಿನಿ ಎಂಬ ಸುಂದರ ವಾಹನವನ್ನು ಅರ್ಪಿಸಲಾಗಿದೆ ಎಂದರು.

      ಹೊತ್ತೊಯ್ಯುವ ಪದ್ಧತಿ ಸ್ಥಗಿತಗೊಂಡಿದೆ:ಜನರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಮೃತದೇಹವನ್ನು ಹೆಗಲು ಕೊಟ್ಟು ಹೊತ್ತೊಯ್ಯುವಂತಹ ಪದ್ಧತಿ ರಾಜ್ಯದ ಬಹುತೇಕ ಕಡೆಗಳಲ್ಲಿ ಸ್ಥಗಿತಗೊಂಡಿದೆ, ಕಡು ಬಡವರು ಸಹ ಇತ್ತಿಚಿನ ದಿನಗಳಲ್ಲಿ ಬಾಡಿಗೆ ಹಣಕೊಟ್ಟು ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ವಾಹನದಲ್ಲಿ ಸಾಗಿಸುತ್ತಿರುವ ಪ್ರಕರಣಗಳು ನಿತ್ಯ ಕಾಣ ಸಿಗುತ್ತವೆ, ಇಂತಹ ಸ್ಥಿತಿ ಗ್ರಾಮೀಣ ಪ್ರದೇಶ ಸೇರಿದಂತೆ ನಗರದಲ್ಲಿಯೂ ಪ್ರಚಲಿತದಲ್ಲಿದ್ದು ಇವೆಲ್ಲಾ ಕಾರಣಗಳಿಂದ ವರ್ತಕರ ಸಂಘವು ‘ಮೋಕ್ಷ ವಾಹಿನಿ’ ಎಂಬ ವಾಹನವನ್ನು ಬ್ಯಾಡಗಿ ಪಟ್ಟಣಕ್ಕೆ ಪರಿಚಯಿಸಲಾಗುತ್ತಿದೆ ಎಂದರು.

        ಸರಳೀಕರಣಕ್ಕೆ ಜೋತು ಬೀಳುತ್ತಿರುವ ಯುವಕರು: ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಬದುಕಿನ ಎಲ್ಲ ಹಂತಗಳೂ ಸಹ ಸರಳೀಕರಣವಾಗಬೇಕೆಂದು ಬಯಸುತ್ತಾರೆ, ಹೀಗಾಗಿ ಅಂತ್ಯಕ್ರಿಯೆ ಪದ್ಧತಿಯಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು ಯಂತ್ರಗಳ ಮೂಲಕ ಗುಂಡಿಗಳನ್ನು ತೆಗೆಯುವುದು ವಾಹನಗಳಲ್ಲಿ ಮೃತದೇಹ ಸಾಗಿಸುವುದು ಸಿಡಿಗಳನ್ನು ಹಾಕಿ ಭಜನೆ, ಹಲಗೆ ಇನ್ನಿತರ ಶಬ್ದಗಳ ಬಳಕೆ ಮಾಡುವುದು ಇಂತಹ ಹತ್ತು ಹಲವು ಬದಲಾವಣೆಗಳಾಗಿದ್ದು ಮಳೆಗಾಲ ದಲ್ಲಿಯೂ ಮೃತದೇಹಕ್ಕೆ ನೀರು ಬೀಳದಂತೆ ಮೋಕ್ಷ ವಾಹಿನಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಸುಮಾರು 2 ಕಿ.ಮೀ. ಅಂತರದಲ್ಲಿರುವ ಮುಕ್ತಿಧಾಮಕ್ಕೆ ಹೊತ್ತೊಯ್ಯುಲು ಸಹಕಾರಿಯಾಗಲಿದೆ ಎಂದರು.

       ಈ ಸಂದರ್ಭದಲ್ಲಿ ಎಂ.ಟಿ.ಹಾವೇರಿ, ಸಿ.ಆರ್.ಪಾಟೀಲ, ಕುಮಾರಗೌಡ ಪಾಟೀಲ, ಚಂದ್ರಶೇಕರ ಅಂಗಡಿ, ಎನ್.ಎಂ.ದೇಸೂರ, ಎಂ.ಎನ್.ಆಲದಗೇರಿ, ಎಂ.ಬಿ.ಹುಚಗೊಂಡರ, ನಾಗರಾಜ ಕುಳೇನೂರ, ದೇವರಾಜ ಹುಡೇದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link