ಚಿತ್ರದುರ್ಗ:
ಹೊಸದುರ್ಗ ತಾಲೂಕಿನ ಕುರುಬರಹಳ್ಳಿಯಲ್ಲಿ ಅರಣ್ಯಾಧಿಕಾರಿಗಳ ಎದುರಿನಲ್ಲಿಯೇ ಸಾರ್ವಜನಿಕರು ಕಲ್ಲು, ದೊಣ್ಣೆ, ಕೋಲುಗಳಿಂದ ಚಿರತೆಯನ್ನು ಹೊಡೆದು ಸಾಯಿಸಿರುವುದನ್ನು ಖಂಡಿಸಿ ವಂದೇಮಾತರಂ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿ ಎ.ಸಿ.ಎಫ್. ರಾಘವೇಂದ್ರರವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ತೋಟದ ಕೆಲಸಕ್ಕೆಂದು ಬಂದಿದ್ದ ಕುರುಬರಹಳ್ಳಿ ಗ್ರಾಮದ ದೇವಿರಮ್ಮ ಮತ್ತು ಅನಿಲ್ಕುಮಾರ್ ಇವರುಗಳ ಮೇಲೆ ಬುಧವಾರ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದರೂ ಬೇಗನೆ ಬರದ ಕಾರಣ ಗ್ರಾಮಸ್ಥರೆಲ್ಲಾ ಸೇರಿಕೊಂಡು ಪೊದೆಯಿಂದ ಹೊರ ಬಂದ ಚಿರತೆಯನ್ನು ಹೊಡೆದು ಸಾಯಿಸಿದ್ದಾರೆ. ಇದರಿಂದ ಕಾಡುಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿದೆ. ಹಾಗಾಗಿ ಚಿರತೆಯ ಪ್ರಾಣ ತೆಗೆದವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
2016 ರಲ್ಲಿಯೂ ಹೊಸದುರ್ಗದಲ್ಲಿ ಇದೇ ರೀತಿ ಕರಡಿಯೊಂದನ್ನು ಅರಣ್ಯಾಧಿಕಾರಿಗಳ ಮುಂದೆ ಹೊಡೆದು ಸಾಯಿಸಲಾಗಿತ್ತು. ಹೊಳಲ್ಕೆರೆ ಎಮ್ಮಿಗನೂರು ಗ್ರಾಮದಲ್ಲಿ ಕರಡಿ ಮರವೇರಿ ಕುಳಿತಾಗ ಪೆಟ್ರೋಲ್, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಾಗ ಅರ್ಧಂಬರ್ಧ ಸುಟ್ಟುಗಾಯಗಳಾಗಿ ಕರಡಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿತು. ಹೊಳಲ್ಕೆರೆ ಸಮೀಪ ಎರಡು ಕರಡಿಗಳನ್ನು ಕೊಲ್ಲಲಾಯಿತು.
ಚಳ್ಳಕೆರೆಯಲ್ಲಿ ಚಿರತೆ ಬಲೆಗೆ ಬಿದ್ದರೂ ಅರಣ್ಯಾಧಿಕಾರಿಗಳ ಮುಂದೆ ಸಾರ್ವಜನಿಕರು ಹೊಡೆದು ಸಾಯಿಸಿದರು. ಚಿತ್ರದುರ್ಗದ ಆಡುಮಲ್ಲೇಶ್ವರದಲ್ಲಿರುವ ಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರಿಂದ ಒಂದು ಕರಡಿ ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು.
ಜಿಂಕೆಗಳಿಗೆ ಆಗಾಗ ಚರ್ಮ ರೋಗ ಕಾಣಿಸಿಕೊಳ್ಳುತ್ತಿದೆ. ಇಷ್ಟೆಲ್ಲಾ ಕಾಡುಪ್ರಾಣಿಗಳು ಹತ್ಯೆಯಾಗಲು ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೋ ಇಲ್ಲ ಸಾರ್ವಜನಿಕರ ಹುಂಬುತನ ಕಾರಣವೋ ಎನ್ನುವುದು ಗೊತ್ತಾಗುತ್ತಿಲ್ಲ. ಆದ್ದರಿಂದ ಹೊಸದುರ್ಗ ತಾಲೂಕಿನ ಕುರುಬರಹಳ್ಳಿಯಲ್ಲಿ ಚಿರತೆಯನ್ನು ಸಾಯಿಸಿದವರ ಮೇಲೆ ಕೇಸು ದಾಖಲಿಸಿ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
