ಬೆಂಗಳೂರು:
ನೆನ್ನೆಯಷ್ಟೇ ಇಬ್ಬರು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂ. ಅಕ್ರಮ ನಗದು-ನಾಣ್ಯ ಗಳನ್ನು ವಶಪಡಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ಇಂದು(ಶನಿವಾರ) ಬೆಳಗಿನ ಜಾವ ಇನ್ನಿಬ್ಬರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಳಗಾವಿಯ ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ ಬಿ.ಪಾಟೀಲ್ ಹಾಗೂ ಬಾಗಲಕೋಟೆ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಚಿದಾನಂದ ಬಿ.ಮಿಂಚಿನಾಳ್ ಅವರಿಗೆ ಸೇರಿದ 6 ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಚಿದಾನಂದಗೌಡ ಅವರಿಗೆ ಸೇರಿದ ರಾಮತೀರ್ಥನಗರದ ಮನೆ, ಖಾನಾಪುರದಲ್ಲಿರು ಕಚೇರಿ, ಬೈಲವಂಗಲದ ಸಹೋದರನ ಮನೆಯಲ್ಲಿ ಶೋಧ ನಡೆಯುತ್ತಿದೆ. ಮಿಂಚಿನಾಳ ಅವರ ವಿಜಯಪುರದಲ್ಲಿರುವ ಎರಡು ಮನೆಗಳು ಮತ್ತು ಕಚೇರಿಯಲ್ಲಿ ಪರಿಶೀಲಿಸಲಾಗುತ್ತಿದೆ.
ಇದುವರೆಗೆ ಆರು ಲಕ್ಷ ರೂ.ಗೂ ಹೆಚ್ಚು ನಗದು, 600 ಗ್ರಾಂ ಚಿನ್ನಾಭರಣ, 3 ಕೆಜಿಗೂ ಹೆಚ್ಚು ಬೆಳ್ಳಿ ಆಭರಣಗಳು ಮತ್ತು ಮಹತ್ವದ ದಾಖಲೆಗಳು, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ. ಇವರಿಬ್ಬರಿಗೆ ಸಂಬಂಧಪಟ್ಟ ಇನ್ನೂ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಡಿವೈಎಸ್ ಪಿ. ಮಲ್ಲಾಪೂರ, ಇನ್ಸಪೆಕ್ಟರ್ ಹಳ್ಳೂರ ಮತ್ತು ಮಠಪತಿ ನೇತೃತ್ವದ ತಂಡ ದಾಳಿ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
