ಸ್ಲಂ ಜನರಿಗೆ ಹಕ್ಕುಪತ್ರ ನೊಂದಣಿಗೆ ಕ್ರಮ

ತುಮಕೂರು

ಸ್ಲಂ ಜನಾಂದೋಲನಾ ಪ್ರತಿಭಟನೆಯಲ್ಲಿ ಬಿ.ವೆಂಕಟೇಶ್ ಮಾಹಿತಿ

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಿರುವ 3.5 ಲಕ್ಷ ಸಬ್ಸಿಡಿ ಬದಲಾಗಿ 4.25 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸ್ಲಂ ನಿವಾಸಿಗಳಿಗೆ ನಿರ್ಮಿಸುವ ವಸತಿ ಯೋಜನೆಯ ಸಬ್ಸಿಡಿಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಚರ್ಚೆ ನಡೆಯುತ್ತಿದೆ. ತ್ವರಿತಗತಿಯಲ್ಲಿ ರಾಜ್ಯದ 3.12 ಲಕ್ಷ ಕುಟುಂಬಗಳಿಗೆ 6 ತಿಂಗಳಲ್ಲಿ ಹಕ್ಕುಪತ್ರ ನೀಡಿ ನಾಮಿನಲ್ ಫೀನಲ್ಲಿ ನೊಂದಣಿಗೆ ಈಗಾಗಲೇ ಸುತ್ತೋಲೆಯಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ.ವೆಂಕಟೇಶ್ ತಿಳಿಸಿದರು.

ಡಿಸೆಂಬರ್ 22 ರಂದು ಸ್ಲಂ ಜನಾಂದೋಲನಾ ಕರ್ನಾಟಕದಿಂದ ಬೆಳಗಾವಿ ಚಲೋ ಹಮ್ಮಿಕೊಂಡು ಸ್ಲಂ ನಿವಾಸಿಗಳ ಸಂವಿಧಾನ ಬದ್ಧ ಹಕ್ಕುಗಳ ಖಾತ್ರಿಗೆ ಒತ್ತಾಯಿಸಿ ಸುವರ್ಣಸೌಧದಲ್ಲಿ ಗುರುವಾರ ಬೃಹತ್ ಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ.ವೆಂಕಟೇಶ್ ಮನವಿ ಸ್ವೀಕರಿಸಿ ಮಾತನಾಡಿದರು.

ವಸತಿ ಸಚಿವರ ನೇತೃತ್ವದಲ್ಲಿ ಸಭೆ

ಸ್ಲಂ ನೀತಿಯನ್ವಯ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ವಸತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು. ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳ ಬಗ್ಗೆ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಕುಂದುಕೊರತೆ ಸಭೆ ಕರೆಯಲಾಗುವುದು. ಮತ್ತು ಇನ್ನಿತರೆ ಹಕ್ಕೋತ್ತಾಯಗಳ ಕುರಿತು ವಸತಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಪ್ರತಿಭಟನಾ ಧರಣಿಯನ್ನು ಉದ್ಧೇಶಿಸಿ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, 2014 ರಲ್ಲಿ ನಡೆದ ಬೆಳಗಾವಿ ಚಲೋಯಿಂದ 944ಸಿಸಿ ಜಾರಿಗೆ ಬಂದು 1.60 ಲಕ್ಷ ಜನರಿಗೆ ಹಕ್ಕುಪತ್ರ ದೊರೆಯುವಂತಾಯಿತು. ಮತ್ತು ಮನೆಗಳ ಸಾಲಮನ್ನಾ, 2016 ರಲ್ಲಿ ಸ್ಲಂ ನೀತಿ ಜಾರಿಯಾಗಲು ಪರಿಣಾಮ ಬೀರಿದೆ. 2017 ರಲ್ಲಿ ಫ್ರೀಡಂ ಪಾರ್ಕಿನಲ್ಲಿ ನಡೆದ ನಿರಂತರ ಧರಣಿಯ ಭಾಗವಾಗಿ ನಗರದ ಬಡಜನರಿಗೆ ಲ್ಯಾಂಡ್‍ಬ್ಯಾಂಕ್ ಯೋಜನೆ ಘೋಷಣೆಯಾಯಿತೇ ಹೊರತು ಜಾರಿಗೆ ಬರಲಿಲ್ಲ ಎಂದು ಹೇಳಿದರು.

90ದಿನಗಳಲ್ಲಿ ಅಧಿಸೂಚನೆ ಹೊರಡಿಸಿ

ವಸತಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುವುದರಿಂದ ಸಿಂಗಲ್ ವಿಂಡೋ ಮಾದರಿಯಲ್ಲಿ ದಾಖಲಾತಿಗಳಿಗೆ ಅನುಮತಿ ನೀಡಿ 6 ಲಕ್ಷ ಸಬ್ಸಿಡಿಯನ್ನು ಎಲ್ಲಾ ವರ್ಗದ ಸ್ಲಂ ನಿವಾಸಿಗಳಿಗೂ ನೀಡಬೇಕು. ಹಾಗೂ 2016ರ ಸ್ಲಂ ನೀತಿಯನ್ವಯ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ, ಸ್ಲಂ ಘೋಷಣೆಗಳನ್ನು 90 ದಿನಗಳಲ್ಲಿ ಅಧಿಸೂಚನೆ ಹೊರಡಿಸಲು ಒತ್ತಾಯಿಸಿದರು.

ಸಿದ್ಧರಾಮಯ್ಯನವರಿಗೆ ಮನವಿ

ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿದ ಸ್ಲಂ ಜನಾಂದೋಲನ ರಾಜ್ಯ ಸಮಿತಿಯ ಪದಾಧಿಕಾರಿಗಳು ಹಕ್ಕೋತ್ತಾಯಗಳ ಮನವಿ ಪತ್ರವನ್ನು ನೀಡಿ, ಸರ್ಕಾರದ ಗಮನ ಸೆಳೆಯಲು ಮನವಿ ಮಾಡಿದರು.

ಇದಕ್ಕೆ ಸ್ಪಂಧಿಸಿದ ಸಿದ್ಧರಾಮಯ್ಯನವರು ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೋಳಿಯವರನ್ನು ಕಳುಹಿಸಲಾಗುವುದು ಎಂದು ಹೇಳಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸತೀಶ್ ಜಾರಕಿಹೋಳಿ ಸ್ಲಂ ಜನರ ಹಕ್ಕೋತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು, ಪಕ್ಷದ ವರಿಷ್ಠರ ಗಮನ ಸೆಳೆದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಸತಿ ಹಕ್ಕು ಕಾಯಿದೆ ಜಾರಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಪ್ರತಿಭಟನೆಯನ್ನು ಬೆಂಬಲಿಸಿ ಗುತ್ತಿಗೆ ಪೌರಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಹುಬ್ಬಳ್ಳಿಯ ವಿಜಯ್ ಗುಂಟ್ರಾಳ್, ಮಂಡ್ಯದ ಎಂ.ಬಿ.ನಾಗಣ್ಣ ಮತ್ತು ಬೆಂಗಳೂರಿನ ಸಾಧನಾ ಮಹಿಳಾ ಸಂಘದ ಗೀತಾ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಾವಿತ್ರಿಬಾಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ಶೋಭಾ ಕಮತಾರ, ರೇಣುಕಾ ಸರಡಗಿ, ವೆಂಕಮ್ಮ, ಪರ್ವೀನ್, ನಿರ್ಮಲ, ಸುನೀತ,

ಸ್ಲಂ ಜನಾಂದೋಲನ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಬಿಜಾಫುರದ ಅಕ್ರಮ್ ಮಾಶಾಳ್ಕರ್, ಗದಗ್‍ನ ಇಮ್ತಿಯಾಜ್ ಮಾನ್ವಿ, ರಾಯಚೂರಿನ ಜನಾರ್ಧನ್ ಹಳ್ಳಿಬೆಂಚಿ, ವಿರೇಶ್, ಯಾದಗಿರಿಯ ಹಣಮಂತ ಶಾಪೂರ್ಕರ್, ಬಾಬುಮೀಯಾ, ಬಳ್ಳಾರಿಯ ಶೇಖರ್ ಬಾಬು, ಚಿತ್ರದುರ್ಗದ ಕೆ.ಮಂಜಣ್ಣ, ತುಮಕೂರಿನ ಅರುಣ್, ತಿರುಮಲಯ್ಯ, ಕೆಂಪರಾಜ್, ದಾವಣಗೆರೆಯ ಶಬ್ಬೀರ್, ಸುಹೈಲ್, ಬೆಳಗಾವಿಯ ಫಕೀರಪ್ಪ ತಳವಾರ, ವಿಷ್ಣು ಇಂಗಳಗಿ, ಜಾಫರ್ ಖಾಲೇಕಾಜಿ ಮುಂತಾದವರು ವಹಿಸಿದ್ದರು. ಪ್ರತಿಭಟನೆಯಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

2020ರಲ್ಲಿ ರಾಜ್ಯದ 1873 ಕೊಳಚೆ ಪ್ರದೇಶಗಳ 3.12 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಕೊಡುವ ತೀರ್ಮಾನವಾಗಿ ಒಂದು ವರ್ಷ ಕಳೆದರೂ ಸಹ ಯಾವುದೇ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಲು ಶ್ರೀಮಂತರಿಗೂ 1.5 ಲಕ್ಷ ಸಬ್ಸಿಡಿ, ಸ್ಲಂ ನಿವಾಸಿಗಳಿಗೂ 1.5 ಲಕ್ಷ ಸಬ್ಸಿಡಿ ನೀಡುತ್ತಿರುವುದು ಸಂವಿಧಾನದ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ.

ಎ.ನರಸಿಂಹಮೂರ್ತಿ
ರಾಜ್ಯ ಸಂಚಾಲಕ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link