ಬಾರಾಮತಿ:
ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭಾನುವಾರ ಶರದ್ ಪವಾರ್ ಅವರ ಭದ್ರಕೋಟೆಯಾದ ಬಾರಾಮತಿಯಿಂದ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಇಂದು ಬಾರಾಮತಿಯಲ್ಲಿ ಮಹಾಯುತಿ ಮೈತ್ರಿಕೂಟ ಸರ್ಕಾರ ಮಹಿಳೆಯರಿಗೆ ನೀಡಿರುವ ಆರ್ಥಿಕ ನೆರವು ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಪ್ರಸ್ತಾಪಿಸಿ ಅಜಿತ್ ಪವಾರ್ ಅವರು ಮತಯಾಚಿಸಿದರು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನಂಬುವಂತೆ ಮತ್ತು ವಿರೋಧಿಗಳು ಹರಡುವ ಸಂವಿಧಾನ ಬದಲಾಯಿಸುವ ಪ್ರಯತ್ನಗಳು ಸೇರಿದಂತೆ ಇತರೆ ಯಾವುದೇ “ಸುಳ್ಳುಗಳನ್ನು” ನಂಬಬೇಡಿ ಎಂದು ಅಜಿತ್ ಪವಾರ್ ಕೇಳಿಕೊಂಡರು. “ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ(ಅಕ್ಟೋಬರ್ನಲ್ಲಿ), ಕೆಲವರು ಸುಳ್ಳು ಸುದ್ದಿಗಳನ್ನು ಹರಡಲು ಪ್ರಯತ್ನಿಸುತ್ತಾರೆ. ಆದರೆ ಅದನ್ನು ನೀವು ನಂಬಬೇಡಿ. ನಾವು ಬದುಕಿರುವವರೆಗೆ ಯಾರೂ ಸಂವಿಧಾನವನ್ನು ಬದಲಾಯಿಸುವ ಧೈರ್ಯ ಮಾಡುವುದಿಲ್ಲ” ಎಂದು ಮಹಾ ಡಿಸಿಎಂ ಹೇಳಿದರು.
ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಅಜಿತ್ ಪವಾರ್ ಅವರು, ಇತ್ತೀಚೆಗೆ ಪ್ರಾರಂಭಿಸಲಾದ “ಮಝಿ ಲಡ್ಕಿ ಬಹಿನ್ ಯೋಜನೆ” ಯನ್ನು ಪ್ರಮುಖವಾಗಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂಪಾಯಿಗಳ ಆರ್ಥಿಕ ಸಹಾಯ ಒದಗಿಸುವ ಗುರಿಯನ್ನು ಹೊಂದಿದೆ.