ಬೆಂಗಳೂರು:
* ಕರಾರು ನೆರವೇರಿಸಿದ ದಿನಾಂಕದಿಂದ 5 ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸುವ ಷರತ್ತು
* ಭೂಮಿ ಕಳೆದುಕೊಂಡ 154 ರೈತರಿಗೆ ಉದ್ಯೋಗ
ಬೆಂಗಳೂರು,ಮಾ,25- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಮೈಸೂರು ಜಿಲ್ಲೆ ಅಡಕನಹಳ್ಳಿ ಹಾಗೂ ತಾಂಡ್ಯ 2ನೇ ಹಂತದ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ಪೈಕಿ ಮೂರು ವರ್ಷದಲ್ಲಿ 232 ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪರವಾಗಿ ಶಾಸಕ ಶರತ್ ಬಚ್ಚೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಬೃಹತ್ ಕೈಗಾರಿಕೆಗೆ ಗುತ್ತಿಗೆ ಕರಾರು ನೆರವೇರಿಸಲಾದ ದಿನಾಂಕದಿಂದ ಮೂರು ವರ್ಷ ಹಾಗೂ ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಕೈಗಾರಿಕೆಗಳಿಗೆ ಗುತ್ತಿಗೆ ಕರಾರು ನೆರವೇರಿಸಿದ ದಿನಾಂಕದಿಂದ 5 ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸಬೇಕೆಂಬ ಷರತ್ತು ವಿಸಲಾಗಿದೆ ಎಂದರು.
ಭೂಮಿ ಕಳೆದುಕೊಂಡ 154 ರೈತರಿಗೆ ಉದ್ಯೋಗ ದೊರೆತಿದೆ. ಇತರೆ ಕಾರ್ಖಾನೆಗಳಿಗೂ ಹೋಗಲು ಸಿದ್ದರಿದ್ದರೆ ಉದ್ಯೋಗ ಕೊಡಿಸಲಾಗುವುದು. ಭೂಮಿ ಕಳೆದುಕೊಂಡು ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/03/WhatsApp-Image-2022-03-25-at-1.52.07-PM.jpeg)