ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ….!

ನವದೆಹಲಿ: 

    ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತಿತರರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ರಾಷ್ಟ್ರೀಯ ರಾಜಧಾನಿಯ ಓಖ್ಲಾ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಶೋಧ ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

    ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್ ಐಆರ್ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದೆಹಲಿ ಎಸಿಬಿ ದಾಖಲಿಸಿರುವ ಮತ್ತೊಂದು ಎಫ್ ಐಆರ್ ನಿಂದ 50 ವರ್ಷದ ಅಮಾನತುಲ್ಲಾ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೊನೆಯದಾಗಿ ಪ್ರಶ್ನಿಸಿದಾಗಿನಿಂದ ಖಾನ್ ಕನಿಷ್ಠ ಹತ್ತು ಇಡಿ ಸಮನ್ಸ್‌ಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಇಡಿ ಬಂಧಿಸಿದ ನಂತರ ಪ್ರತಿಕ್ರಿಯಿಸಿರುವ AAP, ಬಿಜೆಪಿ ನಮ್ಮನ್ನು ಹತ್ತಿಕ್ಕಲು ಎಷ್ಟು ಪ್ರಯತ್ನಿಸುತ್ತದೆಯೋ, ನಾವು ಹೆಚ್ಚು ದನಿಯಾಗುತ್ತೇವೆ ಎಂದು ಹೇಳಿದೆ.