ವಾಷಿಂಗ್ಟನ್:
ಕೆನಡಾದ ಆರೋಪ ‘ಅತ್ಯಂತ ಗಂಭೀರ’ ವಾಗಿದೆ ಎಂದಿರುವ ಅಮೆರಿಕ, ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದ ತನಿಖೆಗೆ ‘ಸಹಕಾರ’ ನೀಡುವಂತೆ ಭಾರತಕ್ಕೆ ಸೂಚಿಸಿದೆ.
ಕೆನಡಾದಲ್ಲಿ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ.ಕೆನಡಾದ ಆರೋಪಗಳನ್ನು ಭಾರತ ತಳ್ಳಿಹಾಕಿದ್ದು, ಇದು ‘ಅಸಂಬದ್ಧ’ ಮತ್ತು ‘ರಾಜಕೀಯ ಪ್ರೇರಿತ’ ಎಂದು ಬಣ್ಣಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕೆನಡಾದ ಆರೋಪಗಳು ಅತ್ಯಂತ ಗಂಭೀರವಾಗಿದೆ ಮತ್ತು ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದೇವೆ. ಭಾರತ ಕೆನಡಾದ ತನಿಖೆಗೆ ಸಹಕರಿಸುವುದನ್ನು ನೋಡಲು ನಾವು ಬಯಸುತ್ತೇವೆ. ಆದರೆ, ಭಾರತ ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಎಂದರು.
ಉಭಯ ದೇಶಗಳ ನಡುವಿನ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದ ಮಿಲ್ಲರ್, ಎರಡೂ ದೇಶಗಳು ಬಹಿರಂಗವಾಗಿ ನೀಡಿರುವ ಹೇಳಿಕೆ ಮೀರಿ ನಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಸಹಕರಿಸಲು ಭಾರತವನ್ನು ಒತ್ತಾಯಿಸಿದ್ದೇವೆ ಮತ್ತು ಹಾಗೆ ಮಾಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು. ಆದಾಗ್ಯೂ, US-ಭಾರತದ ದ್ವಿಪಕ್ಷೀಯ ಸಂಬಂಧ ದೃಢವಾಗಿ ಉಳಿಯುತ್ತದೆ ಎಂದು ಮಿಲ್ಲರ್ ಭರವಸೆ ನೀಡಿದರು.
“ಭಾರತ ಅಮೆರಿಕದ ನಂಬಲಾಗದಷ್ಟು ಬಲವಾದ ಪಾಲುದಾರನಾಗಿ ಮುಂದುವರೆದಿದೆ. ಇಂಡೋ ಫೆಸಿಪಿಕ್ ಮುಕ್ತ ಸೇರಿದಂತೆ ಹಲವಾರು ವಿಷಯಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇವೆ. ನಾವು ಕಾಳಜಿ, ಉತ್ತಮ ಸಂಬಂಧ ಹೊಂದಿರುವಾಗ ಅವರಿಗೆ ಸಂಬಂಧಿಸಿದ ಕಾಳಜಿ ಕುರಿತು ಮುತುವರ್ಜಿ ವಹಿಸಬಹುದು. ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.