ವಾಷಿಂಗ್ಟನ್:
ಕೊಲೆ ಆರೋಪದ ಮೇಲೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಭಾರತೀಯ ಮೂಲದ ಸುಬ್ರಮಣ್ಯಂ ವೇದಂ ಅವರ ಗಡೀಪಾರು ಶಿಕ್ಷೆಯನ್ನು ತಡೆಯಲು ಎರಡು ಪ್ರತ್ಯೇಕ ಅಮೆರಿಕದ ನ್ಯಾಯಾಲಯಗಳು ಮುಂದಾಗಿವೆ. ಇತ್ತೀಚೆಗೆ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಸುಬ್ರಮಣ್ಯಂ ವೇದಂ ಅವರನ್ನು ಪೆನ್ಸಿಲ್ವೇನಿಯಾ ಜೈಲಿನಿಂದ ಬಿಡುಗಡೆಯಾದ ತಕ್ಷಣ ವಲಸೆ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ವಲಸೆ ಮೇಲ್ಮನವಿ ಬ್ಯೂರೋ ಅವರ ಪ್ರಕರಣವನ್ನು ಪರಿಶೀಲಿಸಬೇಕೆ ಎಂದು ನಿರ್ಧರಿಸುವವರೆಗೆ ವಲಸೆ ನ್ಯಾಯಾಧೀಶರು ಗುರುವಾರ ಅವರ ಗಡೀಪಾರು ಪ್ರಕ್ರಿಯೆಯನ್ನು ತಡೆಹಿಡಿದಿದ್ದಾರೆ.
ವೇದಂ, ಅಮೆರಿಕದ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿದ್ದು, ಅವರ ವಕೀಲರ ಪ್ರಕಾರ, 1982 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲ್ಪಡುವ ಮೊದಲು ಅವರ ಪೌರತ್ವ ಅರ್ಜಿಯನ್ನು ಸ್ವೀಕರಿಸಲಾಗಿತ್ತು. 1980 ರಲ್ಲಿ ತನ್ನ ಸ್ನೇಹಿತ ಥಾಮಸ್ ಕಿನ್ಸರ್ ಅವರನ್ನು ಕೊಂದ ಆರೋಪ ವೇದಂ ಮೇಲಿತ್ತು. ಸಾಕ್ಷಿಗಳು ಅಥವಾ ಉದ್ದೇಶದ ಕೊರತೆಯ ಹೊರತಾಗಿಯೂ, ಅವರು ಕಿನ್ಸರ್ ಅವರನ್ನು ಕೊಂದ ಆರೋಪದಲ್ಲಿ ಎರಡು ಬಾರಿ ಶಿಕ್ಷೆಗೊಳಗಾಗಿದ್ದರು.
ಕೊಲೆ ಪ್ರಕರಣದಲ್ಲಿನ ತಿರುವುಮುರುವು ಮಾದಕವಸ್ತು ಅಪರಾಧ ಸಾಬೀತನ್ನು ನಿರಾಕರಿಸುವುದಿಲ್ಲ ಎಂದು ಗೃಹ ಭದ್ರತಾ ಇಲಾಖೆಯ ವಕ್ತಾರರು ಸೋಮವಾರ ಹೇಳಿದ್ದಾರೆ. ಒಂದೇ ಒಂದು ಶಿಕ್ಷೆಯನ್ನು ರದ್ದುಗೊಳಿಸಿದರೂ ಸಹ ICE ಯ ಫೆಡರಲ್ ವಲಸೆ ಕಾನೂನು ಜಾರಿಯನ್ನು ನಿಲ್ಲಿಸುವುದಿಲ್ಲ” ಎಂದು ಸಾರ್ವಜನಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮೆಕ್ಲಾಫ್ಲಿನ್ ತಿಳಿಸಿದ್ದಾರೆ.
“ಸುಬು ಅವರ ಗಡೀಪಾರು ಮತ್ತೊಂದು ಅಸಮರ್ಥನೀಯ ಅನ್ಯಾಯವನ್ನು ಪ್ರತಿನಿಧಿಸುತ್ತದೆ ಎಂದು ವಲಸೆ ಮೇಲ್ಮನವಿ ಮಂಡಳಿಯು ಅಂತಿಮವಾಗಿ ಒಪ್ಪಿಕೊಳ್ಳುತ್ತದೆ ಎಂದು ನಾವು ಆಶಿಸುತ್ತೇವೆ” ಎಂದು ಅವರ ಸಹೋದರಿ ಸರಸ್ವತಿ ವೇದಂ ಹೇಳಿದ್ದಾರೆ. ತಾನು ಮಾಡದ ಅಪರಾಧಕ್ಕಾಗಿ 43 ವರ್ಷಗಳ ಕಾಲ ಗರಿಷ್ಠ ಭದ್ರತಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಲ್ಲದೆ, 9 ತಿಂಗಳ ವಯಸ್ಸಿನಿಂದಲೂ ಅಮೆರಿಕದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯ ಮೇಲೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಅವರು ಹೇಳಿದರು.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಅಲ್ಲಿಂದ ಗಡಿಪಾರಾದ ಬಳಿಕ ದೆಹಲಿಗೆ ಆಗಮಿಸಿದ ಆತನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಂದ್ರ ತನಿಖಾ ದಳ , ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಶನಿವಾರ ಅಮೆರಿಕದಿಂದ ಗಡಿಪಾರು ಮಾಡಲಾಗಿತ್ತು.
ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ಮೇಲಿದ್ದು, ವಿವಿಧ ಪ್ರಕರಣಗಳಲ್ಲಿ ಆತ ಹರಿಯಾಣ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದನು. ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ಲಖ್ವಿಂದರ್ ಕುರಿತಾಗಿ ಹರಿಯಾಣ ಪೊಲೀಸರ ಕೋರಿಕೆಯ ಮೇರೆಗೆ ಸಿಬಿಐ ಕಳೆದ ವರ್ಷ ಅಕ್ಟೋಬರ್ 26 ರಂದು ಇಂಟರ್ಪೋಲ್ ಮೂಲಕ ಪರಾರಿಯಾಗಿರುವ ಆತನ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು.








