ನವದೆಹಲಿ:
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸುತ್ತೇವೆ ಎಂದು ಇಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಆಪರೇಷನ್ ಸಿಂದೂರ್ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ನಿನ್ನೆ ಸೇನೆ, ಸಿಆರ್ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸುಲೇಮಾನ್, ಅಫ್ಘಾನಿ ಮತ್ತು ಗಿಬ್ರಾನ್ ಎಂದು ಗುರುತಿಸಲಾದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ. ಸುಲೇಮಾನ್ ಲಷ್ಕರ್ನ ಉನ್ನತ ಕಮಾಂಡರ್ ಆಗಿದ್ದ . 26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯಲ್ಲಿ ಮೂವರು ಭಾಗಿಯಾದ ಕುರಿತು ಮಾಹಿತಿ ಇದೆ ಎಂದು ಶಾ ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ನಿಮ್ಮ ಬಳಿ ಪುರಾವೆ ಏನಿದೆ?, ಅವರು ದೇಶೀಯ ಉಗ್ರರು ಕೂಡ ಆಗಿರಬಹುದಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ ಚಿದಂಬರಂ ಮಾಡಿದ್ದ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರಿಸಿದ ಶಾ ಪಾಕ್ ವೋಟರ್ ಐಡಿ, ಚಾಕೊಲೇಟ್ಗಳು ಸಿಕ್ಕಿವೆ. ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂಬುದಕ್ಕೆ ಪುರಾವೆ ಏನು ಎಂದು ಮಾಜಿ ಗೃಹ ಸಚಿವ (ಪಿ) ಚಿದಂಬರಂ ಜಿ ಪ್ರಶ್ನಿಸಿದಾಗ ನನಗೆ ನೋವಾಯಿತು. ಅವರು ಏನು ಹೇಳಲು ಬಯಸುತ್ತಾರೆ? ಪಾಕಿಸ್ತಾನವನ್ನು ರಕ್ಷಿಸುವುದರಿಂದ ಅವರು ಏನು ಗಳಿಸುತ್ತಾರೆ? ನಾನು ಚಿದಂಬರಂ ಜಿ ಅವರಿಗೆ ಹೇಳಲು ಬಯಸುತ್ತೇನೆ, ಮೂವರೂ ಪಾಕಿಸ್ತಾನಿಗಳು ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಮೂವರಲ್ಲಿ ಇಬ್ಬರಿಗೆ ಪಾಕಿಸ್ತಾನದ ಮತದಾರರ ಸಂಖ್ಯೆ ನಮ್ಮ ಬಳಿ ಇದೆ. ಅವರ ಮೇಲೆ ಪಾಕಿಸ್ತಾನದಲ್ಲಿ ತಯಾರಾದ ಚಾಕೊಲೇಟ್ಗಳು ಕಂಡುಬಂದಿವೆ. ಇಡೀ ಪ್ರಪಂಚದ ಮುಂದೆ, ಈ ದೇಶದ ಮಾಜಿ ಗೃಹ ಸಚಿವರು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ನಾಶಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿ, ಹಲವಾರು ಭಯೋತ್ಪಾದಕರನ್ನು ಕೊಂದಿವೆ ಎಂದು ಶಾ ಹೇಳಿದರು.
ವಿರೋಧ ಪಕ್ಷದ ಮೇಲೆ ಹರಿಹಾಯ್ದ ಅಮಿತ್ ಶಾ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ಮಾಡುವವರ ಪರ ವಹಿಸಿ ವಿರೋಧಿ ಪಕ್ಷ ಮಾತನಾಡುತ್ತದೆ. ಪಹಲ್ಗಾಮ್ ಹಂತಕರ ನಿರ್ಮೂಲನದ ಸುದ್ದಿಯನ್ನು ರಾಜಕೀಯ ವಲಯದ ಎರಡೂ ಕಡೆಗಳಲ್ಲಿ ಆಚರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಭಯೋತ್ಪಾದಕರು ಸತ್ತಿದ್ದಾರೆ, ನೀವು ಸಂತೋಷವಾಗಿಲ್ಲವೇ? ಎಂದು ಶಾ ಪ್ರಶ್ನಿಸಿದ್ದಾರೆ.








