ಜಾಹೀರಾತು ಸೀರೆ ಉಡಲು ಹೇಳಿ ವಿವಾದಕ್ಕಿಡಾದ ಸರ್ಕಾರ

ತುಮಕೂರು:

  ಆಡಳಿತಶಾಹಿಯ ತಿಳಿಗೇಡಿ ನಿರ್ಧಾರಕ್ಕೆ ಅಂಗನವಾಡಿ ನೌಕರರು ಆಕ್ರೋಶ  

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಜಾರಿಗೆ ತಂದಿರುವ ಪೋಷಣ್ ಅಭಿಯಾನ್ ಕಾರ್ಯಕ್ರಮದ ಪ್ರಚಾರದ ಭಾಗವಾಗಿ ಜಾಹೀರಾತು ಬ್ಯಾನರ್ ರೀತಿಯ ಸೀರೆ ಉಡಲು ಹೇಳಿರುವುದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಸೀರೆಯ ತುಂಬಾ ಪೋಷಣ್ ಅಭಿಯಾನ್ ಎಂದು ಮುದ್ರಿಸಿ ಅದನ್ನು ಸಮವಸ್ತ್ರದಂತೆ ಉಟ್ಟು ಕರ್ತವ್ಯ ನಿರ್ವಹಿಸಬೇಕೆಂದು ಇಲಾಖೆ ಆದೇಶಿರುವುದಕ್ಕೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದೆ. ಸರ್ಕಾರ ಹೆಣ್ಣಿನ ದೇಹವನ್ನು ಪ್ರಚಾರದ ಸರಕಾಗಿಸಲು ಹೊರಟಿರುವುದು ನೀಚತನದ ಪರಮಾವಧಿ ಎಂದು ಸರ್ಕಾರಕ್ಕೆ ಚಳಿ ಬಿಡಿಸಿರುವ ಕಾರ್ಯಕರ್ತೆಯರು, ಆಗಿದ್ದಾಗಲಿ ಈ ಸೀರೆ ಉಡುವುದಿಲ್ಲವೆಂದು ತಿಪಟೂರಿನಲ್ಲಿ ನ.6 ರಂದು ಸೀರೆಯನ್ನು ವಾಪಸ್ ನೀಡಿ ಪ್ರತಿಭಟಿಸಿ, ಸರ್ಕಾರದ ನೀತಿಯನ್ನು ಧಿಕ್ಕರಿಸಿ ಆಡಳಿತಶಾಹಿಗೆ ಸವಾಲೆಸೆದಿದ್ದಾರೆ.

ಜಾಹೀರಾತು ಸೀರೆ ಉಟ್ಟರೆ ಪೋಷಣೆ ಬರಲ್ಲ : ಪೋಷಣ್ ಅಭಿಯಾನದ ಭಾಗವಾಗಿ ಬ್ಯಾನರ್ ರೀತಿಯ ಈ ಜಾಹೀರಾತು ಸೀರೆ ಕೊಡುವ ಬದಲು ಸೀರೆಯ ಹಣವನ್ನು ಅಭಿಯಾನದ ಫÀಲಾನುಭವಿಗಳಿಗೆ ಸರ್ಕಾರ ಖರ್ಚು ಮಾಡಬಹುದಾಗಿತ್ತು. ಕೋವಿಡ್ ಸಂಕಷ್ಟ, ಬೆಲೆ ಏರಿಕೆಯ ಸಂಕಷ್ಟದ ದಿನಗಳಲ್ಲಿ ಪ್ರಚಾರ ಮಾಡುತ್ತಾ ಬಣ್ಣದ ಮಾತಿನಲ್ಲಿ ಜನರಿಗೆ ಪೌಷ್ಠಿಕ ಆಹಾರ ತಿನ್ನಿ ಎಂದು ಹೇಳುವುದು ಮೂರ್ಖತನದ ಪರಮಾವಧಿ ಯಾಗುತ್ತದೆ. ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಅಷ್ಟು ಕಾಳಜಿ ಇದ್ದರೇ ಕಳೆದ ಒಂದು ವರ್ಷದಿಂದ ಬಿಡುಗಡೆಯಾಗದ ಪೋಷಣ್ ಅಭಿಯಾನ್ ಅನುದಾನವನ್ನು ಮೊದಲು ಬಿಡುಗಡೆ ಮಾಡಿ, ಗುಣಮಟ್ಟದ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳನ್ನು ವಿತರಿಸಲಿ ಎಂದು ಆಡಳಿತಗಾರರಿಗೆ ಸಲಹೆ ನೀಡಿರುವ ಕಾರ್ಯಕರ್ತೆಯರು ಜಾಹೀರಾತು ಸೀರೆ ಉಟ್ಟರೆ ಪೋಷಣೆ ಬರಲ್ಲ ಎಂದು ಸರ್ಕಾರವನ್ನು ತಿವಿದಿದ್ದಾರೆ.

ಸಂಘಟನೆಗಳಿಂದ ಸರ್ಕಾರಕ್ಕೆ ಎಚ್ಚರಿಕೆ : ಅಂಗನವಾಡಿ ನೌಕರರು ಪೋಷಣ ಅಭಿಯಾನವನ್ನು 2019ರಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಲಾಖೆಯಿಂದ ಅಭಿಯಾನಕ್ಕೆ ಸಮವಸ್ತ್ರವಾಗಿ ಈ ಸೀರೆಗಳನ್ನು ವಿತರಿಸಿದ್ದು, ಅಂಗನವಾಡಿ ನೌಕರರನ್ನು ಜಾಹೀರಾತು ಗೊಂಬೆಗಳಂತೆ ಬಳಸಿಕೊಳ್ಳಲು ಮುಂದಾಗಿರುವುದಕ್ಕೆ ಖಂಡನೀಯ. ನಿವೃತ್ತರಾಗಿರುವ ನೌಕರರಿಗೆ ನೀಡಬೇಕಾದ ಗೌರವಧನ ನೀಡದೆ ಅಲೆಸುತ್ತಿದ್ದಾರೆ. ಇಲಾಖೆಯ ಸೌಕರ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಆದರೆ ಸಮವಸ್ತ್ರ ವಿಚಾರದಲ್ಲಿ ಇಲಾಖೆ ತ್ವರಿತ ನಿರ್ಧಾರ ಕೈಗೊಳ್ಳಬೇಕಿದೆ ಚುನಾವಣೆ ಶಾಖೆಯಿಂದ ಅಂಗನವಾಡಿಯ ನೌಕರರನ್ನು ಬಿಎಲ್‍ಒಗಳನ್ನಾಗಿ ನೇಮಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ ಅಂಗನವಾಡಿ ನೌಕರರಿಗೆ ಹೆಚ್ಚಿನ ಕಾರ್ಯ ಒತ್ತಡ ಇರುವುದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತದೆ ಆದ್ದರಿಂದ ಸರ್ಕಾರ ಕೂಡಲೇ ಎಲ್ಲ ಕಾರ್ಯಕರ್ತರನ್ನು ಬಿಎಲ್‍ಒ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿರುವ ಅಂಗನವಾಡಿ ನೌಕರರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಪುಕ್ಕಟೆ ಪ್ರಚಾರದ ನೀಚ ತಂತ್ರ, ಆರೋಪ : ಯಾವುದೇ ಸರ್ಕಾರ ಬರಲಿ, ಆಡಳಿತ ನಡೆಸುವವರಿಂದ ಸದಾ ಕಾಲ ಅಸಡ್ಡೆ, ಅವಗಣನೆಗೆ ಒಳಗಾಗಿ ಕೊಡುವ ಅಲ್ಪ ಮಾಸಿಕ ಗೌರವಧನಕ್ಕಿಂತ ಹೆಚ್ಚುವರಿ ಕೆಲಸ ಮಾಡುತ್ತಾ ಜೀತದಾಳುಗಳಂತೆ ಮಳೆ, ಚಳಿ, ಬಿಸಿಲೆನ್ನದೆ ದಿನಪೂರ್ತಿ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವಭಯವನ್ನೂ ಲೆಕ್ಕಿಸದೇ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಇವರ ಸೇವೆಗೆ ಕೃತಜ್ಞವಾಗಿರಬೇಕಾದ ಸರ್ಕಾರವು ಪೋಷಣ್ ಅಭಿಯಾನದ ಪುಕ್ಕಟೆ ಪ್ರಚಾರದ ಭಾಗವಾಗಿ ಬ್ಯಾನರ್ ರೀತಿಯ ಜಹೀರಾತು ಸೀರೆ ಉಡಲು ಹೇಳಿ ಲಿಂಗ ಅಸೂಕ್ಷ್ಮತೆ ಪ್ರದರ್ಶಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಜನರು ಕಾರ್ಯಕರ್ತೆಯರ ಪರ ನಿಂತಿದ್ದಾರೆ.

 ಪ್ರಭುತ್ವದ ಯೋಚನೆಗೆ ಧಿಕ್ಕಾರವಿರಲಿ :

ಪೋಷಣೆ ಅಭಿಯಾನದಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ಕೊಡುವ ಪೂರಕ ಪೌಷ್ಠಿಕ ಆಹಾರದ ಗುಣಮಟ್ಟ ವೃದ್ಧಿಸಿಲ್ಲ, ಅಂಗನವಾಡಿಗೆ ಬೇಕಾದ ಮೂಲಭೂತ ಸೌಕರ್ಯಕ್ಕೆ ಯಾವ ಹಣಕಾಸನ್ನು ಕೊಡುವ ಯೋಜನೆ ಇಲ್ಲ. ಬದಲಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸೀಮಂತ, ಅನ್ನಪ್ರಾಶನದಂತಹ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಕೊಡುವುದು ಮಾಡಲಾಗುತ್ತಿದೆ. ಈ ಯೋಜನೆಗೆ ಅಂಗನವಾಡಿ ನೌಕರರನ್ನು ಪ್ರಚಾರಕರನ್ನಾಗಿಸಿ ಪೋಷಣೆ ಅಭಿಯಾನದ ಬರಹವಿರುವ ಸೀರೆಗಳನ್ನು ಬ್ಯಾನರ್ ರೀತಿ ಬಳಸಬೇಕೆಂದರೆ ನಮ್ಮ ಹೆಣ್ತತನವನ್ನು ನಾವು ಪ್ರಚಾರಕ್ಕಾಗಿ ಬಳಸಬೇಕೆ? ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹೆಣ್ತತನವನ್ನು ಪ್ರಚಾರಕ್ಕೆ ಬಳಸುವ ಪ್ರಭುತ್ವದ ಯೋಚನೆಗೆ ಧಿಕ್ಕಾರವಿರಲಿ.

ಎಸ್.ವರಲಕ್ಷ್ಮೀ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು).

 

ಜಿ.ಕಮಲ, ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)

ನೌಕರರು ಈ ಜಾಹೀರಾತು ಸೀರೆಗಳನ್ನು ಉಟ್ಟು ಕರ್ತವ್ಯನಿರ್ವಹಿಸ ಬೇಕೆಂದರೇ ಹೇಗೆ? ಕರ್ತವ್ಯ ನಿಮಿತ್ತ ಕಚೇರಿ ಮತ್ತು ಜನ ಸಾಮಾನ್ಯರ ನಡುವೆ ಈ ಸೀರೆ ಉಟ್ಟು ಹೋದರೆ ಜನ ನಮ್ಮನ್ನು ನೋಡಿ ನಗೆಪಾಟಲಿಗೆ ಕಾರಣವಾಗುತ್ತದೆ. ಕೋವಿಡ್ ನಂತರದಲ್ಲಿ ಜನರಿಂದ ಅಷ್ಟೊ ಇಷ್ಟೊ ಮರ್ಯಾದೆ ಸಿಗುತ್ತಿದ್ದನ್ನು ಸರ್ಕಾರ ಕಳೆಯಲು ಹೊರಟಿದೆ. ವರ್ಷಕ್ಕೆ ಕೇವಲ ಒಂದು ಜೊತೆ ಸಮವಸ್ತ್ರದ ಸೀರೆ ಕೊಟ್ಟು ವರ್ಷಪೂರ್ತಿ ಉಡಲು ಹೇಳುವ ಸರ್ಕಾರ ಹೆಚ್ಚುವರಿ ಸಮವಸ್ತ್ರ ನೀಡುವ ಬದಲು ಜಾಹೀರಾತು ಸೀರೆ ಕೊಟ್ಟಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.

 


        ಶ್ರೀಧರ್, ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಸರ್ಕಾರದಿಂದ ಸಪ್ಲೆ ಆಗಿರುವ ಸೀರೆಯಲ್ಲಿ ಪೋಷಣ್ ಅಭಿಯಾನ್ ಎಂದು ದೊಡ್ಡದಾಗಿ ಪ್ರಿಂಟ್ ಮಾಡಿದ್ದು, ಈ ಸೀರೆ ಉಟ್ಟುಕೊಳ್ಳಲು ನಮಗೆ ಮುಜುಗರವಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಸೀರೆಗಳನ್ನು ಬೇಡವೆನ್ನುತ್ತಿದ್ದಾರೆ. ತಿಪಟೂರಿನಲ್ಲಿ ನಡೆದ ಪ್ರತಿಭಟನೆ ನನ್ನ ಗಮನಕ್ಕೆ ಬಂದಿದ್ದು, ಈ ವಿಚಾರವಾಗಿ ಮುಂದಿನ ನಿರ್ದೇಶನ ಕೋರಿ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

Recent Articles

spot_img

Related Stories

Share via
Copy link
Powered by Social Snap