ಮಾಸ್ಕೋ:
ದೇಶದೊಂದಿಗೆ ಪ್ರಯಾಣ ಮತ್ತು ವ್ಯಾಪಾರವನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ರಷ್ಯಾದ ಕಜನ್ ಮತ್ತು ಯೆಕಟೆರಿನ್ಬರ್ಗ್ ನಗರಗಳಲ್ಲಿ ಎರಡು ಹೊಸ ಕಾನ್ಸುಲೇಟ್ಗಳನ್ನು(ರಾಯಭಾರ ಕಚೇರಿ) ತೆರೆಯಲು ಭಾರತ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ.ಭಾರತವು ಪ್ರಸ್ತುತ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಮತ್ತು ವ್ಲಾಡಿವೋಸ್ಟಾಕ್ ನಲ್ಲಿ ಎರಡು ಕಾನ್ಸುಲೇಟ್ಗಳನ್ನು ಹೊಂದಿದೆ.
ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುವಾಗ ಕಜಾನ್ ಮತ್ತು ಯೆಕಟೆರಿನ್ಬರ್ಗ್ನಲ್ಲಿ ಹೊಸ ಕಾನ್ಸುಲೇಟ್ಗಳನ್ನು ತೆರೆಯುವ ಘೋಷಣೆ ಮಾಡಿದರು. “ನಾನು ನಿಮ್ಮೆಲ್ಲರೊಂದಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾವು ಕಜನ್ ಮತ್ತು ಯೆಕಟೆರಿನ್ಬರ್ಗ್ನಲ್ಲಿ ಹೊಸ ಕಾನ್ಸುಲೇಟ್ಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಇದು ಪ್ರಯಾಣ ಮತ್ತು ವ್ಯಾಪಾರವನ್ನು ಹೆಚ್ಚಿಸುತ್ತದೆ” ಎಂದು ಮೋದಿ ಹೇಳಿದರು.
ಯೆಕಟೆರಿನ್ಬರ್ಗ್ ರಷ್ಯಾದ ನಾಲ್ಕನೇ ದೊಡ್ಡ ನಗರವಾಗಿದ್ದು, ಇದು ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. 2018 ರಲ್ಲಿ ರಷ್ಯಾದಲ್ಲಿ ಕ್ರೀಡಾಕೂಟ ನಡೆದಾಗ ಈ ನಗರವು ನಾಲ್ಕು ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿತ್ತು. ವೋಲ್ಗಾ ಮತ್ತು ಕಜಾಂಕಾ ನದಿಗಳ ಸಂಗಮದಲ್ಲಿ ನೆಲೆಗೊಂಡಿರುವ ಕಜನ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ ಮತ್ತು ರಷ್ಯಾದಲ್ಲಿ ಉದಯೋನ್ಮುಖ ಆರ್ಥಿಕ ಕೇಂದ್ರವಾಗಿದೆ.
