ಹುಬ್ಬಳ್ಳಿ;
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯವಯಸ್ಕ ವ್ಯಕ್ತಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.
ನಗರದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 18 ರಂದು ನೊಂದ ಮಹಿಳೆಯೊಬ್ಬರು ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಗೆ ಹಾಜರಾಗಿ 2023 ರಲ್ಲಿ ತಾನು ಅಪ್ರಪ್ತೆಯಾದಾಗ ಚಾಲುಕ್ಯ ನಗರದ ನಿವಾಸಿ ಪ್ರಕಾಶ ಕಂಜರಘಾಟ (49) ಎಂಬ ವ್ಯಕ್ತಿ ತನ್ನ ತಂದೆ-ತಾಯಿಯನ್ನು ಕೊಲೆ ಮಾಡುವ ಜೀವ ಬೆದರಿಕೆ ಹಾಕಿ ತನ್ನ ಮನೆಗೆ ಕರೆಸಿಕೊಂಡು ಒತ್ತಾಯದ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದರು.
ಈಗಾಗಲೇ ದೂರಿನ ಅನ್ವಯ ಆರೋಪಿಯನ್ನು ಬಂಧನ ಮಾಡಲಾಗಿದೆ. ಈ ವ್ಯಕ್ತಿ ಇನ್ನೂ ಹಲವಾರು ಜನರಿಗೆ ಮೋಸ ಮಾಡಿದ್ದಾನೆಂಬ ಆರೋಪಗಳಿವೆ. ಈ ಬಗ್ಗೆ ತನಿಖೆ ಮಾಡಲಾಗುವುದು. ಅಲ್ಲದೇ ಯಾರೇ ಇತನಿಂದ ಮೋಸ ಹೋಗಿದಲ್ಲಿ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ತಿಳಿಸಿದರು.
