ಇನ್ನೂ ಸಿಗದ ಏಷ್ಯಾಕಪ್ ಟ್ರೋಫಿ: ಬಿಸಿಸಿಐಯಿಂದ ಐಸಿಸಿ ಬಳಿ ದೂರು,

ಬೆಂಗಳೂರು

     ಭಾರತ 2025 ರ ಏಷ್ಯಾ ಕಪ್ ಫೈನಲ್ ಗೆದ್ದು ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದರೂ, ಬಿಸಿಸಿಐ  ಇನ್ನೂ ಟ್ರೋಫಿಯನ್ನು ಸ್ವೀಕರಿಸಿಲ್ಲ. ಏಷ್ಯಾ ಕಪ್ ಟ್ರೋಫಿ ವಿವಾದ ಈಗ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ನವೆಂಬರ್ 3 ರ ಸೋಮವಾರದೊಳಗೆ ಟ್ರೋಫಿಯನ್ನು ಅವರಿಗೆ ಹಸ್ತಾಂತರಿಸದಿದ್ದರೆ, ಮುಂಬರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

    ಏಷ್ಯಾ ಕಪ್ 2025 ಫೈನಲ್ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡವು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದಾಗ ಈ ವಿವಾದ ಭುಗಿಲೆದ್ದಿತು. ಭಾರತದ ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ, ಅಧಿಕಾರಿಯೊಬ್ಬರು ಏಷ್ಯಾ ಕಪ್ ಟ್ರೋಫಿಯನ್ನು ವೇದಿಕೆಯಿಂದ ತೆಗೆದು ಮೈದಾನದಿಂದ ಹೊರನಡೆದರು, ಇದು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು. 

   ಈ ವಿಷಯದ ಕುರಿತು ಮಾತನಾಡಿದ ದೇವಜಿತ್ ಸೈಕಿಯಾ, “ಹತ್ತು ದಿನಗಳ ಹಿಂದೆ, ನಾವು ಎಸಿಸಿ ಅಧ್ಯಕ್ಷರಿಗೆ ಸಾಧ್ಯವಾದಷ್ಟು ಬೇಗ ಬಿಸಿಸಿಐಗೆ ಟ್ರೋಫಿಯನ್ನು ಹಸ್ತಾಂತರಿಸುವಂತೆ ವಿನಂತಿಸಿ ಪತ್ರ ಬರೆದಿದ್ದೆವು. ಆದರೆ, ಇಲ್ಲಿಯವರೆಗೆ ನಮಗೆ ಟ್ರೋಫಿ ಸಿಕ್ಕಿಲ್ಲ” ಎಂದು ಹೇಳಿದರು. “ನಾವು ಇನ್ನೂ ಒಂದು ದಿನ ಕಾಯುತ್ತಿದ್ದೇವೆ. ನವೆಂಬರ್ 3 ರೊಳಗೆ ನಮಗೆ ಟ್ರೋಫಿ ಸಿಗದಿದ್ದರೆ, ನವೆಂಬರ್ 4 ರಂದು ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಗೆ ನಮ್ಮ ದೂರು ಸಲ್ಲಿಸುತ್ತೇವೆ. ಐಸಿಸಿ ನ್ಯಾಯ ಒದಗಿಸುತ್ತದೆ ಮತ್ತು ಭಾರತಕ್ಕೆ ಸಾಧ್ಯವಾದಷ್ಟು ಬೇಗ ಟ್ರೋಫಿ ಪಡೆಯಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಸೈಕಿಯಾ ಹೇಳಿದರು.

   ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಂಡಿತು. ಇದಾದ ನಂತರವೂ ಭಾರತವು ಪ್ರತಿಯೊಂದು ವೇದಿಕೆಯಲ್ಲೂ ಪಾಕಿಸ್ತಾನವನ್ನು ಬಹಿಷ್ಕರಿಸಿತು. ಈ ನಿಟ್ಟಿನಲ್ಲಿ, ಟೀಮ್ ಇಂಡಿಯಾ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಲು ಸಹ ನಿರಾಕರಿಸಿತು. ಇದಕ್ಕೂ ಮುನ್ನ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡದೆ ಹಿಂದೆ ಸರಿಯಿತು.

   ಇನ್ನು ಮೊಹ್ಸಿನ್ ನಖ್ವಿ ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದಾರೆ ಮತ್ತು ಭಾರತವು ಎರಡೂ ದೇಶಗಳ ನಡುವಿನ ಗಡಿ ಉದ್ವಿಗ್ನತೆಯಿಂದಾಗಿ ನಖ್ವಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಧರಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಬಿಕ್ಕಟ್ಟಿನ ಹೊರತಾಗಿಯೂ, ಭಾರತೀಯ ತಂಡವು ಟ್ರೋಪಿ ಗೆದ್ದ ಸಂಭ್ರವನ್ನು ಆಚರಿಸಲು ಒಂದು ಮಾರ್ಗವನ್ನು ಕಂಡುಕೊಂಡಿತು. ನಾಯಕ ಸೂರ್ಯಕುಮಾರ್ ಯಾದವ್ 2024 ರ ಟಿ 20 ವಿಶ್ವಕಪ್‌ನ ರೋಹಿತ್ ಶರ್ಮಾ ಅವರ ಆಚರಣೆಯನ್ನು ನಕಲಿಸಿ ಕಾಲ್ಪನಿಕ ಟ್ರೋಫಿಯನ್ನು ಎತ್ತಿ ತಂಡದೊಂದಿಗೆ ಆಚರಿಸಿದರು.

Recent Articles

spot_img

Related Stories

Share via
Copy link