ನವದೆಹಲಿ:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಬುಧವಾರ ಗೌರವ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ ಅಟಲ್ ಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ‘ಸದೈವ್ ಅಟಲ್’ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದೆ. ದೇಶ ಸೇವೆ ವಿಚಾರದಲ್ಲಿ ಅಟಲ್ ಜಿ ನಮಗೆಲ್ಲಾ ಸ್ಫೂರ್ತಿ. ಅವರು ಭಾರತದ ಪರಿವರ್ತನೆಗೆ ಶ್ರಮಿಸಿದ ಪ್ರವರ್ತಕ’ ಎಂದು ಹೇಳಿದ್ದಾರೆ.
ಭಾರತ ರತ್ನ ಪುರಸ್ಕೃತ ವಾಜಪೇಯಿ ಅವರು 1998–2004ರ ವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ವಾಜಪೇಯಿ ಅವರು ಆಗಸ್ಟ್ 16, 2018ರಂದು ವಿಧಿವಶರಾಗಿದ್ದರು. 2014ರಲ್ಲಿ ಅವರಿಗೆ ಭಾರತ ರತ್ನ ದೊರಕಿತ್ತು.
