ನವದೆಹಲಿ:
ದೆಹಲಿಗೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವನ್ನು ಘೋಷಿಸುವಲ್ಲಿ ವಿಳಂಬ ಮಾಡುತ್ತಿರುವ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷ , ದೆಹಲಿಯನ್ನು ಆಳಲು ಕೇಸರಿ ಪಕ್ಷದಲ್ಲಿ ಸಮರ್ಥ ನಾಯಕರ ಕೊರತೆಯಿದೆ ಎಂದು ಟೀಕಿಸಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಎಎಪಿ ನಾಯಕಿ ಮತ್ತು ದೆಹಲಿಯ ಹಂಗಾಮಿ ಮುಖ್ಯಮಂತ್ರಿ ಅತಿಶಿ, ರಾಷ್ಟ್ರ ರಾಜಧಾನಿಯನ್ನು ಆಳಲು ಬಿಜೆಪಿಗೆ ವಿಶ್ವಾಸಾರ್ಹ ನಾಯಕರ ಕೊರತೆ ಇದೆ ಎಂದರು.
ಚುನಾವಣಾ ಫಲಿತಾಂಶಗಳು ಪ್ರಕಟವಾಗಿ ಹತ್ತು ದಿನಗಳಾಗಿವೆ. ಫೆಬ್ರವರಿ 9 ರಂದು ಬಿಜೆಪಿ ತನ್ನ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವನ್ನು ಘೋಷಿಸುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ತಕ್ಷಣ ಪ್ರಾರಂಭಿಸುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ದೆಹಲಿಯನ್ನು ನಡೆಸಲು ಅವರಿಗೆ ವಿಶ್ವಾಸವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಆಯ್ಕೆಯಾದ 48 ಬಿಜೆಪಿ ಶಾಸಕರಲ್ಲಿ ಯಾರನ್ನೂ ನಂಬುವುದಿಲ್ಲ. ಮತ್ತು ಬಿಜೆಪಿ ಪಕ್ಷಕ್ಕೆ ಆಡಳಿತದ ಬಗ್ಗೆ ಯಾವುದೇ ದೃಷ್ಟಿಕೋನ ಅಥವಾ ಯೋಜನೆ ಇಲ್ಲ ಎಂದು ಆರೋಪಿಸಿದರು.
ದೆಹಲಿಯ ಜನರನ್ನು ಲೂಟಿ ಮಾಡುವುದಷ್ಟೇ ಬಿಜೆಪಿಗೆ ತಿಳಿದಿದೆ. ಸರ್ಕಾರ ನಡೆಸಲು ಸಮರ್ಥರು ಯಾರೂ ಇಲ್ಲದಿದ್ದರೆ, ಅವರು ಜನರಿಗಾಗಿ ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಗೆಲುವಿನ ನಂತರ ಕೇಸರಿ ಪಕ್ಷದ ನಾಯಕತ್ವ ನಿರ್ಧಾರ ವಿಳಂಬವಾಗುತ್ತಿದ್ದಂತೆ ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ಯುದ್ಧ ಮತ್ತಷ್ಟು ಉಲ್ಬಣಗೊಳ್ಳಲಿದೆ. ಇತ್ತೀಚೆಗೆ ಮುಕ್ತಾಯಗೊಂಡ 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 48 ಸ್ಥಾನಗಳನ್ನು ಗೆದ್ದರೆ, ಎಎಪಿ 22 ಸ್ಥಾನಗಳನ್ನು ಗೆದ್ದಿತು.
ಫೆಬ್ರವರಿ 5 ರಂದು ನಡೆದ ಮತದಾನದ ನಂತರ ಫೆಬ್ರವರಿ 8 ರಂದು ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಯಿತು.2020 ರ ವಿಧಾನಸಭಾ ಚುನಾವಣೆಯಲ್ಲಿ, ಎಎಪಿ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿತ್ತು, ಆಗ ಬಿಜೆಪಿ ಕೇವಲ ಎಂಟು ಸ್ಥಾನಗಳನ್ನು ಗೆದ್ದಿತ್ತು.
