ಬೆಂಗಳೂರು:
ಧರ್ಮಸ್ಥಳದ ಅಸ್ಥಿಪಂಜರಗಳ ಪ್ರಕರಣ ಹಾಗೂ ಇತರ ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಒಂದು ಕುತೂಹಲಕಾರಿ ಪೋಸ್ಟ್ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಫೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, “ಎಚ್ಚೆತ್ತುಕೊಳ್ಳೋಣ, ಶಬರಿಮಲೈ, ಶನಿಸಿಂಗ್ಲಾಪುರ, ಈಶಾ ಈಗ ಧರ್ಮಸ್ಥಳ” ಎಂದು ಫೋಸ್ಟ್ ಮಾಡಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬ ನೂರಾರು ಅಸಹಜವಾಗಿ ಸಾವನ್ನಪ್ಪಿದ ಶವಗಳನ್ನು ಹೂತಿರುವುದಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ ಬಳಿಕ ಎಸ್ಐಟಿ ರಚನೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ. ನೇತ್ರಾವತಿ ನದಿ ದಡದಲ್ಲಿ ಕಳೇಬರ ಪತ್ತೆ ಕಾರ್ಯವನ್ನು ಎಸ್ಐಟಿ ತಂಡ ಚುರುಕುಗೊಳಿಸಿದ್ದು, ಇತ್ತೀಚೆಗೆ ಎರಡು ಗುಂಪುಗಳ ನಡುವೆ ಗಲಾಟೆ ಕೂಡ ಉಂಟಾಗಿತ್ತು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಹಾಗೂ ಇತ್ತೀಚೆಗಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಖಂಡನೆ ವ್ಯಕ್ತಪಡಿಸಿದೆ. 2012ರಲ್ಲಿ ನಡೆದ ಕುಮಾರಿ ಸೌಜನ್ಯ ಹತ್ಯೆಯ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಆ ಸಂಬಂಧ ನಡೆದ ಎಲ್ಲಾ ಪ್ರತಿಭಟನೆಗಳಲ್ಲಿ ವಿಶ್ವಹಿಂದೂ ಪರಿಷತ್ ಭಾಗವಹಿಸಿದೆ. ಆದರೆ ಇದೀಗ ಆಗಂತುಕ ವ್ಯಕ್ತಿಯೋರ್ವ ತಾನು 10-20 ವರ್ಷದ ಹಿಂದೆ ನೂರಾರು ಹೆಣಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಆಧರಿಸಿ ಕ್ಷೇತ್ರದ ಘನತೆಗೆ ಚ್ಯುತಿ ತರುವ ಸಂಚು ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಿಂದೂ ಧರ್ಮಕ್ಕೆ ಸೇರದ ಮತ್ತು ಅನ್ಯಮತೀಯರು ಧರ್ಮಸ್ಥಳವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ರಾಜ್ಯ ಸರಕಾರ SIT ತನಿಖೆ ಮಾಡುವ ಸಂದರ್ಭದಲ್ಲಿ ಕ್ಷೇತ್ರದ ಘನತೆ ಮತ್ತು ಹಿಂದೂ ಶ್ರದ್ಧೆಗೆ ಅಪಚಾರವಾಗದಂತೆ ನೋಡಿಕೊಳ್ಳಬೇಕು. ಸನಾತನ ಧರ್ಮದೊಳಗೆ ಬಿರುಕು ಮೂಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ಎಲ್ಲಾ ಘಟನೆಗಳ ಸಮಗ್ರ ತನಿಖೆಯಾಗಬೇಕು. ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮುಂದುವರಿದಲ್ಲಿ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.








