ತುಮಕೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರಿನಿಂದ ಜನಾಕ್ರೋಶ ಯಾತ್ರೆ ನಡೆಯಲಿದ್ದು, ಏ 7 ರಿಂದ ಮೈಸೂರಿನ ಚಾಮುಂಡಿ ದೇವಿಯ ಆಶೀರ್ವಾದ ಪಡೆದು ಯಾತ್ರೆ ಆರಂಭ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಸಿದ್ದಗಂಗಾ ಮಠದಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಎರಡು ಪ್ರಮುಖ ಹೋರಾಟ ಕೈಗೊಂಡಿದ್ದೇವೆ. ರಾಜ್ಯ ಸರ್ಕಾರದ ನೀತಿ ಖಂಡಿಸಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ. ಹಾಲು, ಪೆಟ್ರೋಲ್ ನೀರು ವಿದ್ಯುತ್ ದರ ಜಾಸ್ತಿ ಆಗಿದೆ. ಈ ಮೂಲಕ ಸರ್ಕಾರ ಜನ ಸಾಮಾನ್ಯರಿಗೆ ಬರೆ ಎಳೆದಿದೆ. ಮೊದಲ ಹಂತದ ಹೋರಾಟ ಏಪ್ರಿಲ್ 7 ಕ್ಕೆ ನಡೆಸುತ್ತೇವೆ ಎಂದರು.
2 ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದ್ದು ಜನರ ಬದುಕನ್ನು ಅಸಹನೀಯವಾಗಿಸಿದೆ. ಜನಾಕ್ರೋಶ ಯಾತ್ರೆ ಬಿಜೆಪಿಯಿಂದ ನಡೆಯುತ್ತಿರುವ ಹೋರಾಟ. ಪಕ್ಷದ ವೇದಿಕೆಯಲ್ಲಿ ನಡೆಸಲಾಗುತ್ತಿದೆ. ಮೈತ್ರಿ ಇದ್ದರೂ ನಾವು ಪ್ರತ್ಯೇಕ ಹೋರಾಟ ನಡೆಸಬಹುದು. ಗ್ರೇಟರ್ ಬೆಂಗಳೂರು ವಿಷಯದಲ್ಲಿ ಜೆಡಿಎಸ್ ಕೂಡಾ ಪ್ರತ್ಯೇಕ ಹೋರಾಟ ಮಾಡಿತ್ತು ಎಂದರು.
ಬೆಲೆ ಏರಿಕೆ ಕುರಿತು ಅಹೋರಾತ್ರಿ ಧರಣಿ ನಡೆಸುತ್ತೇವೆ. ಎರಡನೇ ಹಂತದ ಹೋರಾಟ ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ವಿರುದ್ಧ ಹಾಗೂ ಎಸ್ಸಿ ಎಸ್ಟಿ ಹಣ ದುರುಪಯೋಗ ಮಾಡಿರುವುದರ ಕುರಿತು ಹೋರಾಟ ಮಾಡುತ್ತೇವೆ. ನಾವೆಲ್ಲ ಒಟ್ಟಾಗಿ ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಮನುಷ್ಯರು ಸೇವಿಸುವ ಗಾಳಿ ಬಿಟ್ಟು ಸಿದ್ದರಾಮಯ್ಯ ಸರ್ಕಾರ ಎಲ್ಲದಕ್ಕೂ ತೆರಿಗೆ ಹಾಕುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಯತ್ನಾಳ್ ಆರೋಪ ವಿಚಾರವಾಗಿ ಮಾತನಾಡಿ, ಅವರು ಫ್ರೀ ಆಗಿದ್ದಾರೆ. ಏನು ಬೇಕಾದರೂ ಮಾತನಾಡಲಿ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು.
