ಹೆಚ್ಚುತ್ತಿರುವ ಸಾಲದ ನಡುವೆಯೂ ಖಾತರಿಗಳ ಸಮತೋಲನ

ಬೆಂಗಳೂರು: 

   ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16 ನೇ ಬಜೆಟ್ ಮಂಡಿಸುತ್ತಿರುವಾಗ, ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಒಂದೆಡೆ ಐದು ಖಾತರಿಗಳಿಗೆ ಹಣಕಾಸು ಒದಗಿಸಲು ಮತ್ತು ಬೆಳವಣಿಗೆಗೆ ಪ್ರಮುಖವಾದ ಮೂಲಸೌಕರ್ಯ ಅಭಿವೃದ್ಧಿ ಖಚಿತಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

   ಹಿಂದಿನ ಬಜೆಟ್‌ನಲ್ಲಿ, ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) 28,09,063 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು, 1,05,246 ಕೋಟಿ ರೂ. ಸಾಲ ಪ್ರಸ್ತಾಪಿಸಲಾಗಿತ್ತು, ಇದು 2023-24 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ (83,818 ಕೋಟಿ ರು,) ಶೇ, 23 ರಷ್ಟು ಹೆಚ್ಚಾಗಿದೆ.

   ಈ ಬಾರಿ, ರಾಜ್ಯದ ಆದಾಯ 32,00,000 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಸಾಲ 1.5 ಲಕ್ಷ ಕೋಟಿ ರೂ.ಗಳನ್ನು ಮೀರುತ್ತದೆ. 2024-25 ರ ಅಂತ್ಯದ ವೇಳೆಗೆ ರಾಜ್ಯದ ಬಾಕಿ ಇರುವ ಹೊಣೆಗಾರಿಕೆಗಳು ಒಟ್ಟು ದೇಶಿಯ ಉತ್ಪನ್ನದ ಶೇಕಡಾ 24 ರಷ್ಟಿದೆ ಎಂದು ಅಂದಾಜಿಸಲಾಗಿದೆ, ಅಂದರೆ ಸಾಲವು 6.65 ಲಕ್ಷ ಕೋಟಿ ರೂ.ಗಳಷ್ಟಿದೆ. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆ ಪ್ರಕಾರ ರಾಜ್ಯವು ತನ್ನ GSDP ಯ ಶೇಕಡಾ 25 ರವರೆಗೆ ಸಾಲ ಪಡೆಯಬಹುದು.

   2025-26 ರ ಬಜೆಟ್ ಗಾತ್ರವು 2024-25 ರಲ್ಲಿ 3.71 ಲಕ್ಷ ಕೋಟಿ ರೂ.ಗಳಿಂದ 4 ಲಕ್ಷ ಕೋಟಿ ರೂ.ಗಳನ್ನು ದಾಟುತ್ತದೆ. ಐದು ಖಾತರಿಗಳಿಗೆ ರೂ. 52,000 ಕೋಟಿ (2024-25) ಹಂಚಿಕೆ ಮಾಡಬೇಕಾಗಿರುವುದರಿಂದ ಬಜೆಟ್ ಗಾತ್ರದಲ್ಲಿ ಏರಿಕೆಯಾಗಲಿದೆ. ಕೆಂದರೆ ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದರೆ ಖಾತರಿಗಳಿಗೆ ಹಂಚಿಕೆಯಲ್ಲಿ ಯಾವುದೇ ಇಳಿಕೆ ಇರುವುದಿಲ್ಲ, ಹೀಗಾಗಿ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ, ಮುಖ್ಯಮಂತ್ರಿಗಳು 55,877 ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ. ಮೂಲಸೌಕರ್ಯಕ್ಕಾಗಿ ಹಂಚಿಕೆಯಲ್ಲನ ಹೆಚ್ಚಳವು ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವ ಸಾಧ್ಯತೆಯಿದೆ, ಇತ್ತೀಚೆಗೆ ನಡೆದ ಇನ್ವೆಸ್ಟ್ ಕರ್ನಾಟಕ 2025 – ಜಾಗತಿಕ ಹೂಡಿಕೆದಾರರ ಸಭೆಯು ರೂ. 10.27 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವ ಮತ್ತು ಅಂದಾಜು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದೆ.

   ಹಸಿರು ಇಂಧನ ವಲಯ ಸೇರಿದಂತೆ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಾಧ್ಯತೆಯಿದೆ. ಈ ಖಾತರಿಗಳು ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ರೂ. 10,000 ಕನಿಷ್ಠ ಮೂಲ ಆದಾಯವನ್ನು ನೀಡುತ್ತವೆ ಎಂದು ವರದಿಯಾಗಿರುವುದರಿಂದ, ಸರ್ಕಾರವು ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡಿರುವ ಬಗ್ಗೆ ಹೆಮ್ಮೆಪಡಬಹುದು.

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನಲ್ಲಿ ರೂ. 27,354 ಕೋಟಿ ಆದಾಯ ಕೊರತೆ ಬಜೆಟ್ ಮಂಡಿಸಿದರು ಮತ್ತು ಹಣಕಾಸು ಅಧಿಕಾರಿಗಳ ಸಲಹೆಯಂತೆ ಅದನ್ನು ಪುನರಾವರ್ತಿಸಲಾಗುವುದು. ಖಾತರಿಗಳ ಹೊರೆಯನ್ನು ಉಳಿಸಿಕೊಂಡು, ಹೆಚ್ಚುವರಿ ಬಜೆಟ್ ಮೋಡ್‌ಗೆ ಮರಳಲು ರಾಜ್ಯಕ್ಕೆ ಎರಡು ಅಥವಾ ಮೂರು ಹಣಕಾಸು ವರ್ಷಗಳು ಬೇಕಾಗುತ್ತವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

   ಇದರ ಪರಿಣಾಮವಾಗಿ, ರಾಜ್ಯವು ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನು ತುಂಬಲು ಸಹಾಯ ಮಾಡಲು ರಾಜ್ಯಗಳಿಗೆ ನೀಡಲಾಗುವ ಸಬ್ಸಿಡಿಗಳಾದ ಆದಾಯ ಕೊರತೆ ಅನುದಾನಗಳಿಗೆ (ಆರ್‌ಡಿಜಿ) ಅರ್ಹವಾಗಿರುತ್ತದೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಸರಿಸಿ ಕೇರಳವು ಆರ್‌ಡಿಜಿಗಳನ್ನು ಪಡೆಯುತ್ತಿದೆ.

   ಹಿಂದಿನ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಎರಡು ಮೀಸಲಾದ ಆರ್ಥಿಕ ಕಾರಿಡಾರ್‌ಗಳನ್ನು ಘೋಷಿಸಿದ್ದರು – ಹೊಸ ಮಂಗಳೂರು ಬಂದರು – ಬೆಂಗಳೂರು ಮತ್ತು ಬೀದರ್. ಮುಂಬೈ-ಚೆನ್ನೈ ಆರ್ಥಿಕ ಕಾರಿಡಾರ್ ಮಾದರಿಯಲ್ಲಿ ಪ್ರಸ್ತಾಪಿಸಲಾದ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕಾರ್ಯಸಾಧ್ಯತಾ ವರದಿ ಲೋಕೋಪಯೋಗಿ ಇಲಾಖೆಯ ಬಳಿಯಿದ್ದು, ಯೋಜನೆಯನ್ನು ಕೈಗೆತಿತಕೊಳ್ಳುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

   ಈ ಬಾರಿ, ವಿವಿಧ ಪ್ರದೇಶಗಳಿಗೆ, ವಿಶೇಷವಾಗಿ ಕಲ್ಯಾಣ ಕರ್ನಾಟಕಕ್ಕೆ ಹಣವನ್ನು ಹಂಚಿಕೆ ಮಾಡುವ ಮೂಲಕ ಪ್ರಾದೇಶಿಕ ಸಮತೋಲನ ಸರಿದೂಗಿಸುವುದು ಮುಖ್ಯಮಂತ್ರಿಯ ಮುಂದಿರುವ ಸವಾಲಾಗಿದೆ. ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕಾಗಿ ಮೀಸಲಾದ ಎಸ್‌ಸಿಪಿ/ಟಿಎಸ್‌ಪಿ ಅನುದಾನಗಳನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸದಂತೆ ನೋಡಿಕೊಳ್ಳುವುದು ಮತ್ತೊಂದು ದೊಡ್ಡ ಸವಾಲಾಗಿದೆ.

Recent Articles

spot_img

Related Stories

Share via
Copy link