ತುಮಕೂರು
ಎಸ್.ಹರೀಶ್ ಆಚಾರ್ಯ
ತುಮಕೂರು ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳ ಪೈಕಿ ಗುಬ್ಬಿ ಹೊರತುಪಡಿಸಿ 10 ವಿಧಾನಸಭೆ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದು, ಕುಣಿಗಲ್, ಕೊರಟಗೆರೆ, ತುಮಕೂರು ನಗರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಗೆ ಅಪಸ್ವರ ಹೆಚ್ಚಾಗಿ ಟಿಕೆಟ್ ವಂಚಿತರು ಬಂಡಾಯ ಸ್ಪರ್ಧೆಯ ಬಾಂಬ್ ಅನ್ನು ಸ್ಫೋಟಿಸಲು ಸಜ್ಜಾಗಿದ್ದಾರೆ.
ಮಂಗಳವಾರ ರಾತ್ರಿ ಮೊದಲ ಹಂತದ ಕಮಲ ಟಿಕೆಟ್ ಘೋಷಣೆ ಬೆನ್ನಿಗೆ ತುಮಕೂರು ನಗರ, ಕೊರಟಗೆರೆ, ಕುಣಿಗಲ್ ಬಂಡಾಯದ ಬೇಗುದಿ ತಾರಕಕ್ಕೇರಿದ್ದು, ಕುಣಿಗಲ್ ಬಿಜೆಪಿ ಟಿಕೆಟ್ ಬಯಸಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಂಸದ ಎಸ್.ಪಿ, ಮುದ್ದಹನುಮೇಗೌಡ ಅವರು ತಮಗೆ ಟಿಕೆಟ್ ಕೈ ತಪ್ಪಿದಕ್ಕೆ ಹೆಬ್ಬೂರು ಬಳಿಯ ತಮ್ಮ ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿ ಬಂಡಾಯ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದ್ದಾರೆ.
ಕುಣಿಗಲ್ ಟಿಕೆಟ್ ನೀಡೋದಾಗಿ ಬಿಜೆಪಿ ನಾಯಕರು ಭವಸೆ ಕೊಟ್ಟಿದ್ದರು. ಆದರೆ ನಾಯಕರ ಭರವಸೆ ಹುಸಿಯಾಗಿದೆ. ಹಾಗಾಗಿ ನಾನು ಬಂಡಾಯವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ.ಟಿಕೆಟ್ ಕೈ ತಪ್ಪೋದರ ಹಿಂದೆ ಕಾಣದ ಕೈ ಗಳ ಕೈವಾಡ ಇದೆ. ನಾನು ಅದನ್ನು ತಿಳಿದುಕೊಂಡಿದ್ದೇನೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಮೇಲೆ ಆರೋಪದ ಸುರಿಮಳೆಗೈದರು.
ಮುದ್ದಹನುಮೇಗೌಡರಂತೆಯೇ ಕ್ಷೇತ್ರದ ಮತ್ತೋರ್ವ ಟಿಕೆಟ್ ಆಕಾಂಕ್ಷಿ ಎಚ್.ಡಿ.ರಾಜೇಶ್ ಗೌಡ ಸಹ ಬಂಡಾಯದ ಮುನ್ಸೂಚನೆ ನೀಡಿದ್ದು, ಡಿ.ಕೃಷ್ಣಕುಮಾರ್ ಗೆ ಟಿಕೆಟ್ ಘೋಷಣೆ ಮಾಡಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ರಾಜೇಶ್ಗೌಡರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸ್ವಯಂ ಸಭೆ ಸೇರಿದ ಬೆಂಬಲಿಗರು, ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದುದು ಕಂಡುಬಂದಿತು. ಟಿಕೆಟ್ ಕೈತಪ್ಪಿರುವ ಕುರಿತು ಪ್ರತಿಕ್ರಿಯಿಸಿದ ರಾಜೇಶ್ಗೌಡ ಅವರು ಟಿಕೆಟ್ ಘೋಷಣೆ ಅಷ್ಟೇ ಆಗಿದೆ, ಮುಂದೆ ಅದು ಬದಲಾವಣೆ ಆದರೂ ಆಗಬಹುದು. ಟಿಕೆಟ್ ಸಿಗುವ ಸಿಗುವ ವಿಶ್ವಾಸ ನನಗಿದೆ. ಟಿಕೆಟ್ ಸಿಗದಿದ್ದರೆ ಶುಕ್ರವಾರ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.
ಈ ಮಧ್ಯೆ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿಯಲ್ಲಿನ ಟಿಕೆಟ್ ವಂಚಿತರ ಹೊಸ ವೇದಿಕೆ ಸೃಷ್ಟಿ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾಂಗ್ರೆಸ್ ನ ಮಾಜಿ ಶಾಸಕ ರಾಮಸ್ವಾಮಿ ಗೌಡ, ಬಿಜೆಪಿಯ ಮಾಜಿ ಸಂಸದ ಮುದ್ದಹನುಮೇಗೌಡ, ಎಚ್ ಡಿ.ರಾಜೇಶ್ ಗೌಡರ ನೇತೃತ್ವದ ಹೊಸ ಬಣ ಸೃಷ್ಟಿಸಿ ಮೂವರು ಆಕಾಂಕ್ಷಿತರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಯೋಚನೆಯೂ ಸಹ ನಡೆದಿದೆ ಎನ್ನಲಾಗುತ್ತಿದೆ.
ಈ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ಟಕ್ಕರ್ ಕೊಡಲು ಉಭಯ ಪಕ್ಷದ ಅತೃಪ್ತರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ಮತ್ತೊಂದೆಡೆ ಕೊರಟಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಪ್ಪ ಸಹ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಬಂಡಾಯ ಸ್ಪರ್ಧೆಗಿಳಿಯುವ ಸುಳಿವು ನೀಡಿದ್ದು, ಮತ್ತೋರ್ವ ಟಿಕೆಟ್ ಆಕಾಂಕ್ಷಿ ಪಕ್ಷದ ತೀರ್ಮಾನಕ್ಕೆ ಬದ್ದವಾಗಿರುವುದಾಗಿ ಹೇಳಿ, ಹೈಕಮಾಂಡ್ ಅಂತಿಮಗೊಳಿಸಿರುವ ಅಭ್ಯರ್ಥಿಗಳ ಗೆಲುವಿಗೆ ಇಡೀ ಜಿಲ್ಲೆಯಾದ್ಯಂತ ಹೋರಾಡಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ತುಮಕೂರು ನಗರ ವಿಧಾನಸಭೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಕಮಲ ಟಿಕೆಟ್ ವಂಚಿತರಾದ ಮಾಜಿ ಸಚಿವ ಎಸ್.ಶಿವಣ್ಣ ಸ್ವಾಭಿಮಾನಿ ಕಾರ್ಯಕರ್ತರು, ಬೆಂಬಲಿಗರ ಸಭೆಯನ್ನು ಬುಧವಾರ ಸಂಜೆ ನಗರದ ಕಲ್ಯಾಣ ಮಂಟಪದಲ್ಲಿ ನಡೆಸಿದ್ದು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ, ಸ್ಪರ್ಧೆಗೆ ಒತ್ತಾಯ ಕೇಳಿಬಂದಿದೆ. ಸಭೆಯಲ್ಲಿ ಭಾಗವಹಿಸಿದ್ದ ಚುನಾವಣಾಧಿಕಾರಿಗಳನ್ನು ಶಿವಣ್ಣ ಅವರ ಬೆಂಬಲಿಗರು ವಾಪಸ್ ಕಳುಹಿಸಿದ ಪ್ರಸಂಗವೂ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/04/muddahanume-gowda.jpg)