ಬೆಂಗಳೂರು: ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಸಂಚಾರ ಸರ್ಕಸ್!

ಬೆಂಗಳೂರು:

    ಗುಂಡಿ ಬಿದ್ದ ರಸ್ತೆಗಳು, ಅವೈಜ್ಞಾನಿಕ ಹಂಪ್ಸ್ ಗಳು, ವಾಣಿಜ್ಯ ಸಂಸ್ಥೆಗಳ ರಸ್ತೆ ಬದಿ ಸಾಲುಗಟ್ಟಿ ನಿಲ್ಲುವ ವಾಹನಗಳು.. ಸದಾ ಸದ್ದಿನೊಂದಿಗೆ ಹೂಗೆ- ದೂಳು ತೂರುವ ಯಂತ್ರಗಳು..ನಗರದ ದಕ್ಷಿಣದ ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ದಿನವೂ ಈ ದೃಶ್ಯ ಸಾಮಾನ್ಯವಾಗಿದೆ.

   ರಸ್ತೆಯ ಹಲವು ಕಡೆಗಳು ಗುಂಡಿಗಳು ಬಿದ್ದಿವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಚಾಲನೆ ಕಷ್ಟವಾಗುತ್ತದೆ. ಹಲವು ಸಂದರ್ಭಗಳಲ್ಲಿ ಅಪಘಾತಗಳಿಗೆ ಕಾರಣವಾಗಿದೆ ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಡಾ.ವಿಷ್ಣುವರ್ಧನ್ ರಸ್ತೆಯ ಪಟಾಲಮ್ಮ ದೇವಸ್ಥಾನದ ಬಳಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್ ಬಗ್ಗೆ ಪ್ರಸ್ತಾಪಿಸಿದ ಬನಶಂಕರಿ 6ನೇ ಹಂತದ ನಿವಾಸಿ ಪ್ರಕಾಶ್, ಪ್ರತಿ ವಾರ ಕನಿಷ್ಠ ಮೂರು ಅಪಘಾತಗಳು ವಿಶೇಷವಾಗಿ ರಾತ್ರಿಯಲ್ಲಿ ಸಂಭವಿಸುತ್ತವೆ. ಸ್ಪೀಡ್ ಬ್ರೇಕರ್ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿದೆ. ರಾತ್ರಿಯಲ್ಲಿ ಇದು ಅಷ್ಟೇನೂ ಗೋಚರಿಸುವುದಿಲ್ಲ. ಹೀಗಾಗಿ ಪ್ರಯಾಣಿಕರು ಸ್ಪೀಡಾಗಿ ಬಂದಾಗ ಅಪಘಾತಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ.

   ರಸ್ತೆಯ ಇಕ್ಕೆಲಗಳಲ್ಲಿ ನಾಯಿಕೊಡೆಗಳಂತೆ ಜನವಸತಿ ಬಡಾವಣೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬೆಳೆಯುತ್ತಿದ್ದು, ನೂರಾರು ಜನರು ಹಗಲಿರುಳು ರಸ್ತೆಯನ್ನು ಬಳಸುತ್ತಾರೆ ಆದರೆ ರಸ್ತೆ ಇನ್ನೂ ಗುಂಡಿಗಳಿಂದ ಕೂಡಿದೆ.

   ಕೆಂಗೇರಿ ಪ್ರವೇಶ ದ್ವಾರದ ಬಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ದೂಳು ಉಂಟಾಗುತ್ತಿದ್ದು, ಈಗಾಗಲೇ ಗುಂಡಿಗಳಿಂದ ಕೂಡಿದ ರಸ್ತೆಗೆ ಮತ್ತೊಂದು ಸವಾಲು ಎದುರಾಗಿದೆ. ಇದಲ್ಲದೇ ಅಸಮರ್ಪಕ ಹಾಗೂ ಅವೈಜ್ಞಾನಿಕ ಹಂಪ್ಸ್ ಗಳು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅವುಗಳನ್ನು ಶಾಲೆ, ಕಾಲೇಜು ಅಥವಾ ಮುಖ್ಯ ಜಂಕ್ಷನ್‌ಗಳ ಬಳಿ ಮಾಡಬೇಕು ಎಂದು ವಾದಿಸುತ್ತಾರೆ.

    ಪಟಾಲಮ್ಮ ದೇವಸ್ಥಾನ, ಮಂತ್ರಿ ಆಲ್ಪೈನ್ ಮತ್ತು ಪಾತ್‌ವೇ ಆಸ್ಪತ್ರೆ ಬಳಿ ಅವೈಜ್ಞಾನಿಕ ಗುಂಡಿಗಳಿದ್ದು, ರಸ್ತೆಗಳನ್ನು ಸಮಗೊಳಿಸಬೇಕು ಡಾಂಬರು ಮತ್ತು ವೈಜ್ಞಾನಿಕವಾಗಿ ಹಂಪ್ಸ್ ಗಳಿರಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

    ಇತ್ತೀಚೆಗೆ ಸುರಿದ ಮಳೆಯಿಂದ ಜಲ್ಲಿಕಲ್ಲು ಕೊಳೆತು, ಡಾಂಬರಿನಿಂದ ಬೇರ್ಪಟ್ಟು ರಸ್ತೆಯ ಇಕ್ಕೆಲಗಳಲ್ಲಿ ಶೇಖರಣೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗುವ ಭೀತಿ ಎದುರಾಗಿದೆ.ಈ ಕುರಿತು ರಾಜರಾಜೇಶ್ವರಿನಗರ ವಲಯ ಮುಖ್ಯ ಎಂಜಿನಿಯರ್ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

Recent Articles

spot_img

Related Stories

Share via
Copy link