ಯುಗಾದಿ, ರಂಜಾನ್​ ಹಬ್ಬ: ಸಂಚಾರ ದಟ್ಟಣೆ, ಬದಲಿ ರಸ್ತೆ ಬಳಸುವಂತೆ ಸೂಚನೆ

ಬೆಂಗಳೂರು

    ನಗರದಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳಿಂದ ಸಿಲಿಕಾನ್​ ಸಿಟಿಯಲ್ಲಿ  ಹೆಜ್ಜೆ ಹೆಜ್ಜೆಗೂ ಟ್ರಾಫಿಕ್​ ಸಮಸ್ಯೆ ಉಂಟಾಗುತ್ತಿದೆ.​ ಗಲ್ಲಿ ಗಲ್ಲಿಗಳಲ್ಲೂ ವಾಹನಗಳ ದಟ್ಟಣೆ ಇರುತ್ತದೆ. ಕಾಮಗಾರಿಗಳಿಂದ ವಾಹನ ಸವಾರರು ನಿತ್ಯ ಟ್ರಾಫಿಕ್  ಸೇರಿದಂತೆ ಧೂಳಿನ ಕಿರಿಕಿರಿ ಅನುಭವಿಸುವಂತಾಗಿದೆ. ಸದ್ಯ ಯಲಹಂಕ, ಮಾರತಹಳ್ಳಿ, ದೊಡ್ಡನೇಕುಂಡಿ ಸೇರಿ ಕೆಲ ಪ್ರದೇಶಗಳಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಜೊತೆಗೆ ಯುಗಾದಿ ಮತ್ತು ರಂಜಾನ್ ಹಬ್ಬ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಲಿದೆ. ಹಾಗಾಗಿ ವಾಹನ ಸವಾರರು ಸಹಕರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್​ ಮನವಿ ಮಾಡಿದ್ದಾರೆ.

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಕೆಎಸ್​​ಆರ್​ಟಿಸಿ ಸಂಸ್ಥೆ ವತಿಯಿಂದ ಹೆಚ್ಚುವರಿ ಬಸ್ ಬಿಟ್ಟಿರುವ ಹಿನ್ನೆಲೆ ಪ್ರಯಾಣಿಕರು ಈ ದಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಊರುಗಳಿಗೆ ತೆಳುತ್ತಾರೆ. ಹಾಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆಯಾಗುವ ಕಾರಣ ಸಾರ್ವಜನಿಕರು ಬದಲಿ ರಸ್ತೆ ಮೂಲಕ ತೆರಳುವಂತೆ ಸೂಚಿಸಲಾಗಿದೆ.

    ಪೈಪ್‌ಲೈನ್ ಹಾನಿಯಿಂದಾಗಿ ಯಲಹಂಕದಿಂದ ಬಾಗಲೂರು ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ನಿಧಾನವಾಗಿದೆ. ಮಾರತಹಳ್ಳಿ ಪೊಲೀಸ್ ಠಾಣೆಯ ಎದುರಿನ ಓಆರ್​ಆರ್​ (ಹೊರ ವರ್ತುಲ ರಸ್ತೆ) ಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ, ಕಾಡುಬೀಸನಹಳ್ಳಿಯಿಂದ ಕಾರ್ತಿಕನಗರ ಕಡೆಗೆ ಸಂಚಾರ ತುಂಬಾ ನಿಧಾನವಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

    ಸಕ್ರಾ ಆಸ್ಪತ್ರೆ ರಸ್ತೆಯಲ್ಲಿ BWSSB ಮತ್ತು BBMP ಕಾಮಗಾರಿ ನಡೆಯುತ್ತಿರುವುದರಿಂದ, ಬೆಳ್ಳಂದೂರು ಕೋಡಿಯಿಂದ ಸಕ್ರಾ ಆಸ್ಪತ್ರೆ ಕಡೆಗೆ ವಾಹನ ಸಂಚಾರ ತುಂಬಾ ನಿಧಾನವಾಗಿರಲಿದ್ದು, ವಾಹನ ಸವಾರರು ಅದಕ್ಕೆ ತಕ್ಕಂತೆ ಕೆಲಸಕಾರ್ಯಗಳನ್ನು ಯೋಜಿಸುವಂತೆ ಸೂಚಿಸಲಾಗಿದೆ. 

    ಇನ್ನು ಅದೇ ರೀತಿಯಾಗಿ ನಾಗವಾರ ಜಂಕ್ಷನ್​ನಿಂದ ಹೆಣ್ಣೂರು ಜಂಕ್ಷನ್ ಕಡೆಗೆ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸಂಚಾರ ನಿಧಾನಗತಿಯಲ್ಲಿರಲಿದೆ. ಬೆಸ್ಕಾಂ ಕಾಮಗಾರಿಯಿಂದಾಗಿ ಜಯಂತಿ ಗ್ರಾಮದಿಂದ ರಾಘವೇಂದ್ರ ವೃತ್ತದ ಕಡೆಗೆ ಸಾಗುವ ರಸ್ತೆಯಲ್ಲಿ ನಿಧಾನಗತಿಯ ಸಂಚಾರವಿರುತ್ತದೆ ಸಂಚಾರಿ ಪೊಲೀಸರು ಕೋರಿದ್ದಾರೆ.

Recent Articles

spot_img

Related Stories

Share via
Copy link