ಬೆಂಗಳೂರು
ಬೆಂಗಳೂರಿನ ಬಿಬಿಎಂಪಿ ಕೌನ್ಸಿಲ್ ಕಟ್ಟಡದ ಮೇಲೆ ಹತ್ತಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿದ್ಯಮಾನ ಗುರುವಾರ ನಡೆದಿದೆ. ವಿಜಯನಗರ ನಿವಾಸಿಯಾಗಿರುವ ಉಮಾ ಎಂಬವರೇ ಕೃತ್ಯಕ್ಕೆ ಮುಂದಾದವರು. ಉಮಾ ಕಳೆದ ಹಲವು ತಿಂಗಳಿಂದ ಸಹಾಯಕ್ಕಾಗಿ ಪಾಲಿಕೆಯ ಆರೋಗ್ಯ ವಿಭಾಗದ ಕಚೇರಿಗೆ ಹತ್ತಾರು ಬಾರಿ ಹೋಗಿ ಬಂದಿದ್ದಾರೆ.
ಪಾಲಿಕೆಯ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಬದುಕಲು ದಾರಿ ಇಲ್ಲ, ಪಾಲಿಕೆ ಕಡೆಯಿಂದ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರಂತೆ. ಆದರೆ ಪಾಲಿಕೆ ಅಧಿಕಾರಿಗಳು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ, ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಅದಕ್ಕಾಗಿ ನೇರ ಬಿಬಿಎಂಪಿ ಕಚೇರಿ ಕಟ್ಟಡವನ್ನೇ ಏರಿದ್ದರು. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಉಮಾ ಬಿಬಿಎಂಪಿ ಕಟ್ಟಡ ಏರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
2024ರ ಅಕ್ಟೋಬರ್ನಲ್ಲಿ ತಲೆ ನೋವು ಎಂದು ಉಮಾ ದಾಸರಹಳ್ಳಿಯ ಬಿಬಿಎಂಪಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪೇನ್ ಕಿಲ್ಲರ್ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕ್ರಮೇಣವಾಗಿ ತಲೆನೋವು ಜಾಸ್ತಿ ಆಗಿದೆ. ನಂತರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ಕೊಟ್ಟಾಗ ತಲೆಯೊಳಗೆ ಗಡ್ಡೆ ಆಗಿದೆ ಆಪರೇಷನ್ ಮಾಡಬೇಕು ಎಂದಿದ್ದಾರೆ. ತಕ್ಷಣವೇ ಆಪರೇಷನ್ ಮಾಡಿಸಿದ್ದಾರೆ. ಇದಾದ ಬಳಿಕ ಎಂದಿನಂತೆ ಕೆಲಸಕ್ಕೆ ಹೋಗಲು ಉಮಾರಿಗೆ ಸಾಧ್ಯವಾಗಿಲ್ಲ. ಗಂಡ ಇಲ್ಲ, ಒಬ್ಬ ಮಗ ಇದ್ದಾನೆ. ಹೇಗೆ ಬದುಕು ನಿರ್ವಹಣೆ ಮಾಡುವುದು ಎಂಬುದು ಉಮಾ ಚಿಂತೆ. ಹೀಗಾಗಿ ಪಾಲಿಕೆ ನಿಧಿಯಿಂದ ಸಹಾಯ ಕೇಳಲು ಹೋಗಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಉಮಾ ಹೇಳಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಡ ಏರಿದ್ದ ಉಮಾ, ಸಿಎಂ ಭೇಟಿ ಮಾಡಿಸಿ ಎಂದು ಪಟ್ಟು ಹಿಡಿದಿದ್ದರು. ಬಳಿಕ ಹಲಸೂರು ಗೇಟ್ ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಕಟ್ಟಡದಿಂದ ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ.
