ಬಿಬಿಎಂಪಿ ಉಪ-ಮೇಯರ್ ರಮಿಳಾ ನಿಧನ : ಸೂಕ್ತ ಅಭ್ಯರ್ಥಿ ನೇಮಕಕ್ಕೆ ಚರ್ಚೆ ಶುರು

ಬೆಂಗಳೂರು:

      ರಮೀಳಾ ಉಮಾಶಂಕರ್‌ ನಿಧನದಿಂದ ತೆರವಾದ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. 

      ನ. 12ರಂದು ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಅಂದೇ ಉಪಮೇಯರ್‌ ಆಯ್ಕೆಯೂ ನಡೆಯಬೇಕು ಎಂಬುದಾಗಿ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

      ‘ಉಪಮೇಯರ್‌ ಹುದ್ದೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. ಹೀಗಾಗಿ ಆಕಾಂಕ್ಷಿಗಳೂ ಸಾಕಷ್ಟು ಇದ್ದಾರೆ. ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ಒಂದೆರಡು ದಿನಗಳಲ್ಲಿ ನಿರ್ಧರಿಸಲಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಹೇಳಿದರು. 

      ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಇರಾದೆಯಲ್ಲಿಲ್ಲ. ಈಗ ಜೆಡಿಎಸ್‌ ಒಳಗೆ ಆಯ್ಕೆ ಅಂತಿಮವಾಗಬೇಕಿದೆ. ಈ ಪೈಕಿ ನೇತ್ರಾ ನಾರಾಯಣ್‌, ಭದ್ರೇಗೌಡ ಮತ್ತು ರಾಜಶೇಖರ್‌ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ.  ‘ಹಲವರು ಆಕಾಂಕ್ಷಿಗಳೇನೋ ಹೌದು. ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಕೆಲವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಲು ನಿರ್ಧರಿಸಿದ್ದೇವೆ’ ಎಂದು ಶರವಣ ಹೇಳಿದರು.

      ರಮೀಳಾ ಅವರ ಕ್ಷೇತ್ರವಾದ ಕಾವೇರಿಪುರ ವಾರ್ಡ್‌ ಸದಸ್ಯ ಸ್ಥಾನಕ್ಕೆ ಇನ್ನು 6 ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ. ಸ್ಪರ್ಧೆ ಒಡ್ಡಲು ಬಿಜೆಪಿಯೂ ಸಿದ್ಧಗೊಳ್ಳುತ್ತಿದೆ ಎಂದು ಪಾಲಿಕೆಯ ಬಿಜೆಪಿ ಸದಸ್ಯರೊಬ್ಬರು ಹೇಳಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ