ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ….!

ಬೆಂಗಳೂರು:

   ರಾಜ್ಯದ ಪುರಸಭೆ ಮತ್ತು ಪಾಲಿಕೆಗಳಲ್ಲಿ ಯಾವುದೇ ಖಾತೆ ಹೊಂದಿರದ ವಸತಿ ಮತ್ತು ವಾಣಿಜ್ಯ ಆಸ್ತಿಗಳಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾದರಿಯಲ್ಲಿ “ಇ-ಖಾತಾ’ ನೀಡಲು ಸರಕಾರ ನಿರ್ಧರಿಸಿದೆ. ಇದರಿಂದ ಆಯಾ ಆಸ್ತಿ ಮಾಲಕರಿಗೆ ಮಾರಾಟ ನೋಂದಣಿ, ಸಾಲ ಸೇರಿದಂತೆ ಹಲವು ರೀತಿಯ ಅನುಕೂಲ ಆಗಲಿದೆ.

   ವಿಕಾಸಸೌಧದಲ್ಲಿ ಬುಧವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್‌ ನೇತೃತ್ವದಲ್ಲಿ ಗ್ರಾಮ ಪಂಚಾಯತ್‌, ಸ್ಥಳೀಯ ನಗರ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸ್ಥಿರಾಸ್ತಿಗಳ “ಇ-ಖಾತಾ’ ನೋಂದಣಿಯ ತ್ವರಿತ ವಿತರಣೆ ಕುರಿತು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಎಲ್ಲ ರೀತಿಯ ವಸತಿ, ಕೃಷಿ ಅಥವಾ ವಾಣಿಜ್ಯ ಸ್ವತ್ತುಗಳಿಗೆ ಕಾನೂನು ಪ್ರಕಾರ ಖಾತೆಯ ಆವಶ್ಯಕತೆ ಇರುತ್ತದೆ.

   ಆದರೆ ಪುರಸಭೆ ಮತ್ತು ಪಾಲಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಸತಿ ಮತ್ತು ವಾಣಿಜ್ಯ ಆಸ್ತಿಗಳು ಯಾವುದೇ ಖಾತೆಯನ್ನು ಹೊಂದಿರದೆ ಇರುವುದು ಕಂಡು ಬಂದಿದೆ. ಈ ಆಸ್ತಿಗಳಿಗೆ ಬಿಬಿಎಂಪಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನಿಬಂಧನೆ ಮತ್ತು ಕಾರ್ಯ ವಿಧಾನದಂತೆಯೇ ಖಾತೆ ನೀಡಲು ಸಭೆ ಯಲ್ಲಿ ನಿರ್ಧರಿಸಲಾಯಿತು. ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಇದಕ್ಕೆ ಸಮ್ಮತಿ ಸೂಚಿಸಿದರು. 

   ಖಾತೆ ಹೊಂದಿರದ ಆಸ್ತಿಗಳಿಗೆ ಇ-ಖಾತಾ ಸಿಗುವುದರಿಂದ ಪ್ರಮುಖವಾಗಿ ಆಯಾ ಆಸ್ತಿಗಳ ಮಾರಾಟ ನೋಂದಣಿಗೆ ಅಧಿಕೃತತೆ ಬರುತ್ತದೆ. ನಕಲು ಹಾವಳಿ ತಪ್ಪಲಿದೆ. ಸಹಜವಾಗಿ ಖರೀದಿದಾರರೂ ಮೋಸ ಹೋಗಲು ಅವಕಾಶ ಇರುವುದಿಲ್ಲ. ಬ್ಯಾಂಕ್‌ ಗಳಲ್ಲೂ ಇ-ಖಾತಾ ಸೌಲಭ್ಯದಿಂದ ಸಾಲ ಪಡೆ ಯುವುದು ಸುಲಭವಾಗುತ್ತದೆ. ಈ ಪ್ರಕ್ರಿಯೆ ಸುಗಮಗೊಳಿಸಲು ಮುಡಾದಂತಹ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು “ಇ-ಆಸ್ತಿ’ಗೆ ತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.

   ಇದಲ್ಲದೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಪ್ತಿಯ ಸ್ವತ್ತುಗಳಿಗೂ “ಇ-ಖಾತಾ’ ವಿತರಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ಪ್ರಸ್ತುತ ಮ್ಯಾನ್ಯುವಲ್‌ ಆಗಿ ಖಾತಾಗಳನ್ನು ನೀಡಲಾಗುತ್ತಿದೆ. ಸಂಯೋ ಜನೆಗೊಳಿಸಿ ಎಲೆಕ್ಟ್ರಾನಿಕ್‌ ಖಾತಾ (ಇ-ಖಾತಾ) ನೀಡುವುದರಿಂದ ಅಲೆದಾಟ ತಪ್ಪಲಿದೆ. ಮಾರಾಟ ನೋಂದಣಿಗೆ ಅನುಕೂಲ ಆಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 

   ಇನ್ನು ರಾಜ್ಯದಲ್ಲಿ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ಸಾರ್ವಜನಿಕರಿಗೆ ವಿತರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಜಂಟಿ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಯಿತು. ಅಷ್ಟೇ ಅಲ್ಲ, ಈ ಪಡೆಯು 2 ತಿಂಗಳಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಲಾಯಿತು.

   ಖಾತಾ ವಿತರಿಸುವ ಸಂಬಂಧ ತತ್‌ಕ್ಷಣದ ಪರಿ ಹಾರೋಪಾಯಗಳನ್ನು ಸೂಚಿಸುವುದು ಸೇರಿ ದಂತೆ ಇತರ ಅಂಶಗಳು ಇರುವ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಮಲೆ ನಾಡು ಮತ್ತು ಕರಾವಳಿ ಭಾಗಗಳಲ್ಲಿ ವಿಶೇಷ ವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸು ವಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸ ಬೇಕಿದೆ. ಇದಕ್ಕೆ ಕಾರ್ಯಪಡೆ ವರದಿ ಪೂರಕವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. 

   ಅಭಿವೃದ್ಧಿ ಹಕ್ಕುಗಳ ವರ್ಗಾವಣೆಗೆ (ಟಿಡಿಆರ್‌) ಸಂಬಂಧಿಸಿದಂತೆ ಅನಿಯಮಿತ ಬಹುವಹಿವಾಟುಗಳನ್ನು ನಡೆಸಲಾಗುತ್ತಿದ್ದು, ಅವುಗಳನ್ನು ಟ್ರ್ಯಾಕ್‌ ಮಾಡುವುದೇ ಸವಾಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.ಈ ಕುರಿತು ಸಮಾಲೋಚನೆ ನಡೆಸಿದ ಅನಂತರ ಸಭೆಯಲ್ಲಿದ್ದ ಇ-ಆಡಳಿತ ಇಲಾಖೆ ಕಾರ್ಯದರ್ಶಿಗಳು, ಇ-ಆಸ್ತಿ/ ಇ-ಸ್ವತ್ತುಗಳಂತೆ ಪ್ರತ್ಯೇಕ ಪ್ರತ್ಯೇಕ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿ, ಈ ಟಿಡಿಆರ್‌ಗಳಿಗೆ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಲಾಗುವುದು. ಇದರಿಂದ ಟಿಡಿಆರ್‌ ಅನಿಯಮಿತ ಬಹುವಹಿವಾಟುಗಳನ್ನು ಟ್ರ್ಯಾಕ್‌ ಮಾಡಿ ನಿರ್ವಹಿಸಲು ಅನುಕೂಲ ಆಗಲಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link