ಅನಧಿಕೃತವಾಗಿ ತ್ಯಾಜ್ಯ ನೀರು ಹರಿವು : ಪರಿಶೀಲನೆ ಚುರುಕುಗೊಳಿಸಿದ BBMP

ಬೆಂಗಳೂರು

    ಬೆಂಗಳೂರು ಜಲಮಂಡಳಿಯ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು BWSSB ನಿರ್ಧರಿಸಿದೆ. ಈ ಸಂಬಂಧ ಮೇ 1ರಿಂದ ಪರಿಶೀಲನೆ ತೀವ್ರಗೊಳಿಸಿ ನೋಟಿಸ್ ನೀಡುವಂತೆ ಸೂಚಿಸಲಾಗಿದೆ.

    ಸೋಮವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಬೆಂಗಳೂರು ಜಲಮಂಡಳಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಸಭೆ ನಡೆಸಿದರು.

    ಈ ವೇಳೆ ಮಾತನಾಡಿದ ಅವರು, ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿ ಹಾಗೂ ಮಳೆ ನೀರು ಕಾಲುವೆಗೆ ಹರಿಸುತ್ತಿರುವವರ ಬಗ್ಗೆ ಪರಿಶೀಲನೆಯನ್ನು ಚುರುಕುಗೊಳಿಸಿ. ಮೇ 1 ರಿಂದ ನೋಟೀಸ್‌ ಜಾರಿ ಮಾಡುವಂತೆ ಜಲಮಂಡಳಿ ಅವರು ಸೂಚಿಸಿದರು.

   ಜಲಮಂಡಳಿಯಿಂದ ಸಂಪರ್ಕ ಪಡೆಯದೇ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಮಳೆ ನೀರು ಕಾಲುವೆಗೂ ಹರಿಯ ಬಿಡಲಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಮೇ 7 ರ ತನಕ ಅವಕಾಶ ನೀಡಲಾಗಿದೆ.

    ಕಳೆದ ಒಂದು ವಾರದಿಂದ ಜಲಮಂಡಳಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ 528 ಕಟ್ಟಡಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇವುಗಳಲ್ಲಿ 446 ಕಡೆಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

    ಪತ್ತೆಯಾದ 446 ಪ್ರಕರಣಗಳಲ್ಲಿ 221 ಸಂಪರ್ಕಗಳನ್ನು ಅಗತ್ಯ ಶುಲ್ಕ ಭರಿಸಿಕೊಂಡು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇನ್ನು 390 ಸಂಪರ್ಕಗಳಿಗೆ ನೋಟೀಸ್‌ ಜಾರಿ ಮಾಡಲಾಗಿದೆ. ಈ ಪರಿಶೀಲನೆಯ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು.

    ಈ ಮೂಲಕ ತ್ಯಾಜ್ಯ ನೀರನ್ನು ಅಸಮರ್ಪಕವಾಗಿ ವಿಲೇವಾರಿ ಮಾಡುವ, ಮಳೆ ನೀರನ್ನು ಕಲುಷಿತ ಗೊಳಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. 

     BWSSB ವ್ಯಾಪ್ತಿಯಲ್ಲಿರುವ 20 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ವಸತಿ ಸಮುಚ್ಚಯಗಳು, ಹೋಟೆಲ್‌ ಗಳು, ವಾಣಿಜ್ಯ ಕಟ್ಟಡಗಳನ್ನು ಆದ್ಯತೆಯ ಮೇರೆಗೆ ಪರಿಶೀಲನೆ ನಡೆಸಬೇಕು. ಮೇ 7 ನಂತರವೂ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸದೇ ಇರುವಂತವರ ಮೇಲೆ ಕ್ರಮ ಕೈಗೊಳ್ಳಬೇಕು.

    ಅರ್ಜಿ ಸಲ್ಲಿಸದವರು 15 ದಿನಗಳ ಒಳಗಾಗಿ ಜಲಮಂಡಳಿಯ ಅಧಿಕೃತ ಸಂಪರ್ಕ ಪಡೆಯದೇ ಇದ್ದಲ್ಲಿ ಅವರ ಮೇಲೆ ಕಾನೂನಿನ ಅನ್ವಯ ಕ್ರಮಕ್ಕೆ ಮುಂದಾಗಬೇಕು.

     ಅನಧಿಕೃತವಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವುದರಿಂದ ಸಾರ್ವಜನಿಕರಲ್ಲಿ ಆರೋಗ್ಯದ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆಗಳು ಹೆಚ್ಚು. ಇದನ್ನು ತಡೆಯುವುದು ಹಾಗೂ ನಗರವನ್ನು ಸ್ವಚ್ಛವಾಗಿ ಇರಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

     ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ್, ಮುಖ್ಯ ಎಂಜನಿಯರ್ ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.

 

Recent Articles

spot_img

Related Stories

Share via
Copy link
Powered by Social Snap