ಮಾರ್ಚ್ 25ರಂದು ಬೆಂಗಳೂರು ಹಬ್ಬ ಆಚರಣೆ : ಆರ್. ಅಶೋಕ್

ಬೆಂಗಳೂರು

    ಕರ್ನಾಟಕ ಸಂಸ್ಕತಿ ಇತಿಹಾಸ ಹಾಗೂ ಪರಂಪರೆಗಳನ್ನು ಬೆಂಗಳೂರಿನಲ್ಲಿ ನೆಲೆಸಿರುವ ಭಾಷಿಕರನ್ನು ಒಳಗೊಂಡಂತೆ ನಾಡಿನ ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಮಾರ್ಚ್ 25ರಂದು ಬೆಂಗಳೂರು ಹಬ್ಬ ಆಚರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಮ್ಮ ಬೆಂಗಳೂರು ಹಬ್ಬ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಬೆಂಗಳೂರು ಹಬ್ಬವನ್ನು ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 10.00 ರಿಂದ ಸಂಜೆ 6.00 ರವರೆಗೆ ಕಬ್ಬನ್ ಪಾರ್ಕ್ ಆವರಣದ ವಿವಿಧ ಸ್ಥಳಗಳಲ್ಲಿ ವಿವಿಧ  ಕಾರ್ಯಕ್ರಮಗಳು ಹಾಗೂ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

    ಸಂಜೆ 6 ಗಂಟೆಗೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ನಂತರ ಅನನ್ಯ ಭಟ್, ನವೀನ್ ಸಜ್ಜು, ಜನಾರ್ಧನ್ ತಂಡದವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಕಬ್ಬನ್ ಪಾರ್ಕ್ ಆವರಣದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಚಿತ್ರಸಂತೆಯ ಮಾದರಿಯಲ್ಲಿ ಕಬ್ಬನ್ ಪಾರ್ಕ್ನ ರಸ್ತೆಯಲ್ಲಿ ವೈವಿಧ್ಯಮಯ ಚಿತ್ರಕಲೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ಹಾಗೂ ಶಿಲ್ಪಕಲಾ ಉತ್ಸವದಡಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ಜೇಡಿಮಣ್ಣು/ಶಿಲೆ/ಕಾಷ್ಠ ಶಿಲ್ಪಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಏರ್ಪಡಿಸಲಾಗಿದೆ. ವಿವಿಧ ಇಲಾಖೆಗಳು, ಅಕಾಡೆಮಿಗಳು, ವಿವಿಧ ಸಂಘಟನೆಗಳ ವತಿಯಿಂದ ಕರಕುಶಲ ವಸ್ತುಗಳ ಮೇಳವನ್ನು ಆಯೋಜಿಸಲಾಗಿದೆ.

    ಬಾಲಭವನ ಆವರಣದ ಆಂಪೀಕ್ ಥಿಯೇರ‍್ನಲ್ಲಿ ವಿವಿಧ ಅಕಾಡೆಮಿಗಳು, ರಂಗ ಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿನಾಟಕಗಳು, ಗೊಂಬೆ ಪ್ರದರ್ಶನ, ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. ಕಬ್ಬನ್ ಪಾರ್ಕ್ ಬ್ಯಾಂಡ್ ಸ್ಟಾಂಡ್ ವೇದಿಕೆಯಲ್ಲಿ ಪೊ?ಲಿಸ್ ಬ್ಯಾಂಡ್ ವಾದನ, ನೃತ್ಯಜನಪದ ಗಾಯನ, ಯಕ್ಷಗಾನ, ನಾಟಕ ಹಾಗೂ ವಿವಿಧ ರಾಜ್ಯಗಳ ಸಂಘಟನೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವಿರುತ್ತದೆ. ಬಾಲಭವನ ಸಭಾಂಗಣದಲ್ಲಿ ಮಾರ್ಚ್ 24 ರಿಂದ 25 ರವರೆಗೆ ಪ್ರತಿದಿನ 3 ಪ್ರದರ್ಶನಗಳ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದರು.

    ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಹಾಗೂ ಇತರೆ ಪ್ರಕಾಶನ ಸಂಸ್ಥೆಗಳ ಸಹಯೋಗದಲ್ಲಿ ಕಬ್ಬನ್ ಪಾರ್ಕ್ ಅವರಣದಲ್ಲಿ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದೆ. ಹೊಟೇಲ್‌ಗಳ ಸಂಘ ಹಾಗೂ ಬೆಂಗಳೂರಿನಲ್ಲಿರುವ ವಿವಿಧ ರಾಜ್ಯಗಳ ಸಂಘಗಳ ಸಹಯೋಗದಲ್ಲಿ ಕಬ್ಬನ್ ಪಾರ್ಕ್ನಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಖ್ಯಾತ ಹೋಟೆಲ್‌ಗಳ ಎಲ್ಲಾ ತಿನಿಸುಗಳ ಪ್ರದರ್ಶನ ಮತ್ತು ಮಾರಾಟವನ್ನು ಒಂದೇ ಸ್ಥಳದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

    ಬೆಂಗಳೂರು ಹಬ್ಬದ ಅಂಗವಾಗಿ ಮಾರ್ಚ್ 25 ಮತ್ತು 26ರಂದು ಬೆಂಗಳೂರಿನ ಆಯ್ಕೆ ಸಿನಿಮಾ ಮಂದಿರಗಳಲ್ಲಿ ಬೆಳಗಿನ ಆಟದಲ್ಲಿ ಹಳೆಯ ಕನ್ನಡ ಸಿನಿಮಾಗಳ ಉಚಿತ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.

     ಮಾರ್ಚ್ 26ರಂದು ಸಂಜೆ 05.00 ಗಂಟೆಗೆ ವಿಧಾನಸೌಧದ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಲಾಗುವುದು. ನಂತರ ನಾಡಿನ ಪ್ರಸಿದ್ಧ ಸಂಗೀತಗಾರರಿಂದ ಗಾಯನ ಕಾರ್ಯಕ್ರಮ ಹಾಗೂ ಪ್ರಭಾತ್ ಕಲಾವಿದರಿಂದ ನೃತ್ಯ ಪ್ರರ್ಶನ ಆಯೋಜಿಸಲಾಗಿದೆ.

    ಕಾರ್ಯಕ್ರಮದಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳ. ಬಿ.ಬಿ.ಎಂ.ಪಿ. ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap