ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಘಟಕದ ವಿರುದ್ಧ ಚಾಲಕರು ಮತ್ತು ಕ್ಲೀನರ್ಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಪರಿಣಾಮವಾಗಿ 5,300 ಆಟೋ ಟಿಪ್ಪರ್ಗಳು ಮತ್ತು 700 ಕಸದ ಲಾರಿಗಳ ಸಂಚಾರ ಸ್ಥಗಿತಗೊಂಡು, ನಗರದಾದ್ಯಂತ ಕಸ ಸಂಗ್ರಹಣೆಗೆ ಅಡಚಣೆ ಉಂಟಾಗಿದೆ. ನೂರಾರು ಪ್ರತಿಭಟನಾಕಾರರು ಬಿಬಿಎಂಪಿ ಮುಖ್ಯ ಕಚೇರಿ ಬಳಿ ಜಮಾಯಿಸಿ, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಪರಿಸ್ಥಿತಿ ಅರಿತ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಐಪಿಡಿ ಸಾಲಪ್ಪ ವರದಿ ಜಾರಿಗೊಳಿಸುವುದು, ಚಾಲಕರ ಹಾಗೂ ಕ್ಲೀನರ್ಗಳ ಸೇವೆಯನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಮುಷ್ಕರ ನಡೆಸುತ್ತಿದ್ದಾರೆ. ಬಿಬಿಎಂಪಿ ಪ್ರಧಾನ ಕಚೇರಿ ಬಳಿ 500ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆ ಮಾಡಿದರು. ಈ ವೇಳೆ ಕಚೇರಿ ಪ್ರವೇಶಿಸಲು ಪೊಲೀಸರು ಅವಕಾಶ ನೀಡದೇ ಹಲವರನ್ನು ವಶಕ್ಕೆ ಪಡೆದರು ಎಂದು ಮುಷ್ಕರದ ನೇತೃತ್ವ ವಹಿಸಿರುವ ಕಾರ್ಮಿಕ ಸಂರಕ್ಷಣೆ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್ ತಿಳಿಸಿದ್ದಾರೆ.
ನೇರ ಪಾವತಿ ಉದ್ಯೋಗಕ್ಕೆ ಒತ್ತಾಯ: “ಚಾಲಕರು ಮತ್ತು ಕ್ಲೀನರ್ಗಳನ್ನು ಬಿಬಿಎಂಪಿ ಬಹಳ ವರ್ಷಗಳಿಂದ ನಿರ್ಲಕ್ಷಿಸುತ್ತಿದೆ. ನಮ್ಮ ಬೇಡಿಕೆ ನ್ಯಾಯಬದ್ಧವಾಗಿದೆ. ಗುತ್ತಿಗೆದಾರರಿಂದ ನಮ್ಮನ್ನು ನೇಮಿಸಿಕೊಳ್ಳುವ ಬದಲು ನೇರ ಪಾವತಿ ಯೋಜನೆ ಅಡಿ ನೇಮಿಸಿಕೊಳ್ಳಬೇಕು. ಪ್ರತಿಭಟನೆಗೆ ಸಾವಿರಾರು ಜನರು ಬೆಂಬಲ ನೀಡಲಿದ್ದಾರೆ” ಎಂದು ತ್ಯಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ತ್ಯಾಜ್ಯ ಸಂಗ್ರಹ ಚಾಲಕರ ಮತ್ತು ಕ್ಲೀನರ್ ಮುಷ್ಕರಿಂದ ಬೆಂಗಳೂರಲ್ಲಿ ಕಸ ಸಂಗ್ರಹಣೆ ಸ್ಥಗಿತಗೊಂಡಿದೆ. ಇಂದು ಮುಂದುವರಿದಲ್ಲಿ ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಸಮಸ್ಯೆ ಉಂಟಾಗಲಿದೆ. “ನಿರಂತರವಾಗಿ ಮೂರು ದಿನ ಮುಷ್ಕರ ಮುಂದುವರಿದರೆ ನಗರದಲ್ಲಿ ಭಾರಿ ಮಾಲಿನ್ಯ ಉಂಟಾಗಲಿದೆ” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಸಂಘಟನೆಯ ಕಾರ್ಯನಿರ್ವಾಹಕ ಟ್ರಸ್ಟಿ, ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್, ಪೌರಕಾರ್ಮಿಕರ ಪರಿಸ್ಥಿತಿ ಬಗ್ಗೆ ಮಾತನಾಡಿದರು. “ಗುತ್ತಿಗೆದಾರರನ್ನು ಅವಲಂಬಿಸುವ ಬದಲು ಬಿಬಿಎಂಪಿ ನೇರವಾಗಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಮುಷ್ಕರ ಮುಂದುವರಿದರೆ ಬೆಂಗಳೂರಿನಾದ್ಯಂತ ಕಸ ಸಮಸ್ಯೆಯಾಗಲಿದೆ” ಎಂದು ತಿಳಿಸಿದ್ದಾರೆ.








