ಬೆಂಗಳೂರು:
ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. 20ಕ್ಕೂ ಹೆಚ್ಚು ಮಹಿಳೆಯರಿಗೆ 30 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರಿಂದ ಸವಿತಾ ಎಂಬಾಕೆಯನ್ನು ಬಂಧಿಸಲಾಗಿದೆ.
ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಸಚಿವ ಎಂ.ಬಿ. ಪಾಟಿಲ್ ಹೆಸರೇಳಿ ಗಾಳ ಹಾಕುತ್ತಿದ್ದ ಸವಿತಾ, ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು.
ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಸವಿತಾ, ಮತ್ತದೇ ಚಾಳಿ ಮುಂದುವರಿಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿಯಾಗಿದ್ದಾಳೆ.








