ಬೆಂಗಳೂರು:
ಪ್ರಧಾನಿ ನರೇಂದ್ರಮೋದಿ ಅವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವಿರೆಂದು ನಂಬಿದ್ದೇನೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಮಗೆ ತಿಳಿದಿರುವಂತೆ ಬಡಜನರ ಹಸಿದ ಹೊಟ್ಟೆಯನ್ನು ತಣಿಸಲು ಯುಪಿಎ ಸರ್ಕಾರ ರಾಷ್ಟಿಯ ಭದ್ರತಾ ಕಾಯ್ದೆ ಜಾರಿಗೆ ತಂದು 80 ಕೋಟಿ ಜನರಿಗೆ ಆಹಾರಧಾನ್ಯ ವಿತರಿಸಿತ್ತು. ಆದರೆ ನಿಮ್ಮ ಸರ್ಕಾರ ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್ ನಲ್ಲಿ ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದೆ, ಯಾಕೆ? ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ರೈತರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ರೂ. 50,121 ಕೋಟಿ ರೂ.ಗಳಷ್ಟು ಕಡಿಮೆ ಮಾಡಿದ್ದೀರಿ. ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನೀಡುವ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಿಸಲು ನೀಡಲಾಗುತ್ತಿದ್ದ ಅನುದಾನವನ್ನು ರೂ.1500 ಕೋಟಿ ರೂ.ಗಳಿಂದ ರೂ. ಒಂದು ಲಕ್ಷಕ್ಕೆ ಇಳಿಸಿದ್ದೀರಿ, ಬೆಲೆ ಕುಸಿತ ಮತ್ತು ಬೀಜ-ಗೊಬ್ಬರದ ಬೆಲೆ ಏರಿಕೆಯಿಂದಾಗಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಹೀಗಿದ್ದರೂ ಹತ್ತಿ ನಿಗಮದ ಬೆಂಬಲ ಬೆಲೆಯ ಅನುದಾನವನ್ನು ರೂ.782 ಕೋಟಿಯಿಂದ ರೂ. 1 ಲಕ್ಷಕ್ಕೆ ಇಳಿಸಿದ್ದೀರಿ. ರೈತರಿಗೆ ನೆರವಾಗುವ ಯೋಜನೆಗಳನ್ನೇ ಸ್ಥಗಿತಗೊಳಿಸಿ ನೀವು ರೈತರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದೀರೇನು ಎಂದು ಪ್ರಶ್ನಿಸಿದ್ದಾರೆ.
ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳ ಪಾಲಿನ ಸಂಜೀವಿನಿ ನರೇಗಾ ಯೋಜನೆಯನ್ನು ಜಾರಿಗೆ ತಂದಿರುವುದು ಯುಪಿಎ ಸರ್ಕಾರ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ನರೇಗಾಕ್ಕೆ ನೀಡಲಾಗುವ ಸಹಾಯಧನವನ್ನು ಶೇಕಡಾ 21.66ರಷ್ಟು (ರೂ.60,000 ಕೋಟಿ) ಕಡಿಮೆ ಮಾಡಲಾಗಿದೆ. ನಿಮ್ಮ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣದ ಹೆಚ್ಚಳ ಹೊಸ ದಾಖಲೆ ನಿರ್ಮಿಸಿದೆ.
ಈಗ ಗ್ರಾಮೀಣ ಜನತೆಯಿಂದಲೂ ಉದ್ಯೋಗ ಕಸಿದುಕೊಂಡು ನೀವು ಏನನ್ನು ಸಾಧಿಸಲು ಹೊರಟಿದ್ದೀರಿ? ಉಚಿತ ಎಲ್ಪಿಜಿ ಸಿಲಿಂಡರ್ ಎಂಬ ಪೊಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ, ಕಳೆದ ಎಂಟು ವರ್ಷಗಳಿಂದ ಎಲ್ಪಿ ಜಿ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ. ಹಳ್ಳಿಯ ಬಡವರು ಮತ್ತೆ ಉರುವಲು ಹಾಕಿ ಒಲೆ ಉರಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ ಎಲ್ಪಿಜಿ ಮೇಲಿನ ಸಬ್ಸಿಡಿಯನ್ನು ಶೇಕಡಾ 75ರಷ್ಟು (ರೂ.2,257 ಕೋಟಿ) ಕಡಿಮೆ ಮಾಡಲಾಗಿದೆ. ಅಸಹಾಯಕ ಬಡವರ ಮೇಲೆ ಯಾಕೆ ನಿಮಗಿಷ್ಟು ದ್ವೇಷ ಮೋದಿಯವರೆ ಎಂದು ಸಿದ್ದರಾಮಯ್ಯ ತೀಕ್ಷವಾಗಿ ಪ್ರಶ್ನಿಸಿದ್ದಾರೆ.
ನಿಮ್ಮ ಖಾಸ ಸ್ನೇಹಿತರಾದ ಗೌತಮ್ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್ ಬರ್ಗ್ ವರದಿ ಬತ್ತಲೆ ಮಾಡಿದೆ. ಈ ಕಳ್ಳಾಟದಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಿಸುತ್ತಿದೆ. ಅಂತಾರಾಷ್ಟಿಯ ಮಟ್ಟದಲ್ಲಿ ಇದು ಸುದ್ದಿಯಾಗಿ ಭಾರತದ ಮಾನ ಹರಜಾಗುತ್ತಿದೆ. ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರು, ಎಲ್ಐಸಿಯಲ್ಲಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ. ವಿರೋಧ ಪಕ್ಷಗಳ ನಾಯಕರು ಕೂತರೂ ನಿಂತರೂ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗಟ್ಟುತ್ತಿರುವ ಕೇಂದ್ರ ಸರ್ಕಾರ, ಉದ್ಯಮಿ ಅದಾನಿ ಬಾನಗಡಿ ಬಗ್ಗೆ ತನಿಖೆ ಮಾಡಲು ಹಿಂಜರಿಯುತ್ತಿರುವುದೇಕೆ?
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟಿಯ ಯೋಜನೆ ಎಂದು ಘೋಷಿಸಿ ವೆಚ್ಚದ ಶೇಕಡಾ 50ರಷ್ಟನ್ನು ಕೇಂದ್ರ ಸರ್ಕಾರವೇ ಈ ಬಜೆಟ್ನಲ್ಲಿ ಕೊಟ್ಟಿರುವುದು ಕೇವಲ ರೂ.2300 ಕೋಟಿ. ಯೋಜನೆ ಮುಗಿಯುವುದು 2050ಕ್ಕೋ? ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಬೆಂಗಳೂರು ಮೆಟ್ರೋ ಯೋಜನೆಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ನರೇಂದ್ರಮೋದಿಯವರೆ ನಿಮಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ ಎಂದು ಕೇಳಿದ್ದಾರೆ.
ಯುಪಿಎ ಸರ್ಕಾರ ರಾಷ್ಟಿಯ ಭದ್ರತಾ ಕಾಯ್ದೆಯಡಿ 80 ಕೋಟಿ ಜನರಿಗೆ ಆಹಾರಧಾನ್ಯ ವಿತರಿಸಿತ್ತು. ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದ್ದೀರಿ ಏಕೆ? ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ. ರೈತರಿಗೆ ನೆರವಾಗುವ ಯೋಜನೆಗಳನ್ನೇ ಸ್ಥಗಿತಗೊಳಿಸಿ ನೀವು ರೈತರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದೀರೇನು? ನಿಮ್ಮ ಆಡಳಿತಾವಧಿಯಲ್ಲಿ ನಿರುದ್ಯೋಗ ಪ್ರಮಾಣ ದಾಖಲೆ ನಿರ್ಮಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/04/Siddaramaiah.gif)