ಹಾಸನ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಕೆಲ ಹಿಂದೂ ಸಂಘಟನೆ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಾನು ಮುಷ್ತಾಕ್ ಅವರು ಪ್ರತಿಕ್ರಿಯೆ ನೀಡಿ, ಮೈಸೂರು ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಖುಶಿಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿರುವ ವಿಚಾರವಾಗಿ ತೀವ್ರ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಖಂಡಿತಾ ಇದು ನನಗೆ ಖುಷಿಯ ವಿಚಾರ. ಇದನ್ನು ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತೀರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡಹಬ್ಬ ಅಂತಾರೆ, ಅದನ್ನು ಗೌರವಿಸುತ್ತೇನೆ ಎಂದರು.
ನಾಡ ಹಬ್ಬ, ಚಾಮುಂಡೇಶ್ವರಿ ತಾಯಿ ಅಂತ ಪ್ರೀತಿ ಅಭಿಮಾನದಿಂದ ಕರೀತೀರಿ, ಇದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಾಡಿನ ಭಾಗವಾಗಿದೆ. ಹಾಗಾಗಿ ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಬ್ಬವಾಗಿದೆ, ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ. ನಾನು ತಂದೆ ತಾಯಿ ಜೊತೆ ಹಲವು ಬಾರಿ ಜಂಬೂ ಸವಾರಿ ನೋಡಲು ಹೋಗಿದ್ದೆ. ಈಗ ನಾನೇ ದಸರಾ ಉದ್ಘಾಟನೆಗೆ ಆಹ್ವಾನ ಬಂದಿದೆ. ಹಾಗಾಗಿ ನನಗೆ ಸಂತೋಷವಾಗಿದೆ ಎಂದು ಬಾನು ಮುಷ್ತಾಕ್ ಅವರು ಸಂತಸ ವ್ಯಕ್ತಪಡಿಸಿದರು.
ಬೂಕರ್ ಪ್ರಶಸ್ತಿ ವಿಜೇತರಾಗಿರುವ ಭಾನು ಮುಷ್ತಾಕ್ ಅವರಿಗೆ ಕಲಾವಿದೆಯೊಬ್ಬರು ಬಾಗಿನ ನೀಡಿದರು. ಹಾಸನದಲ್ಲಿರುವ ಬಾನು ಮುಷ್ತಾಕ್ ಅವರ ಮನೆಗೆ ಆಗಮಿಸಿದ ಕಲಾವಿದೆ ಹಾಗೂ ಅಮ್ಮನ ಮಡಿಲು ಸಂಸ್ಥಾಪಕಿ ಶಶಿಕಲಾ ಹಿಂದೂ ಸಂಪ್ರದಾಯದಂತೆ ಬಾಗಿನ ನೀಡಿದ್ದಾರೆ. ಹೂ, ಬಳೆ, ಸೀರೆ ಅರಿಶಿನ ಕುಂಕುಮ ನೀಡಿ ಶುಭ ಹಾರೈಸಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿನ್ನೆಲೆ ಕಲಾವಿದೆ ಗೌರವ ಸಲ್ಲಿಸಿದ್ದು, ಬಾಗಿನವನ್ನು ಬಾನು ಮುಷ್ತಾಕ್ ಖುಷಿಯಾಗಿ ಸ್ವೀಕರಿಸಿದ್ದಾರೆ.








