ನವದೆಹಲಿ:
ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲಿನಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಆಪ್ತ ಸಹಾಯಕ ಬಿಭವ್ ಕುಮಾರ್ ಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಕುಮಾರ್ ಅವರನ್ನು ಮತ್ತೆ ಆಪ್ತ ಸಹಾಯಕರನ್ನಾಗಿ ನಿಯೋಜಿಸಿಕೊಳ್ಳಬಾರದು ಅಥವಾ ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೇ ಅಧಿಕೃತ ಹುದ್ದೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಲ್ಲಾ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೆ ಆರೋಪಿ ಮುಖ್ಯಮಂತ್ರಿ ನಿವಾಸಕ್ಕೆ ಪ್ರವೇಶಿಸಬಾರದು ಮತ್ತು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡದಂತೆ ನ್ಯಾಯಾಲಯ ಆದೇಶಿಸಿದೆ. ಮೇ 18 ರಂದು ಬಂಧಿತರಾಗಿದ್ದ ಕುಮಾರ್ಗೆ 100 ದಿನಗಳ ನಂತರ ನ್ಯಾಯಾಲಯ ಜಾಮೀನು ನೀಡಿದೆ. ಇದಕ್ಕೂ ಮುನ್ನಾ AAP ವಿರುದ್ಧ ವಾಗ್ದಾಳಿ ನಡೆಸಿದ ಸ್ವಾತಿ ಮಲಿವಾಲ್, ಬಿಭವ್ ಕುಮಾರ್ ವಿರುದ್ಧ ಹಲ್ಲೆ ಆರೋಪ ಮಾಡಿದ ನಂತರ ನನ್ನನ್ನು ವಿಲನ್ ಆಗಿ, ಮುಖ್ಯಮಂತ್ರಿಗಳ ಆಪ್ತನನ್ನು ಹಿರೋ ತರಹ ಬಿಂಬಿಸಲಾಗುತ್ತಿದೆ. ಪಕ್ಷದಿಂದ ಅವಮಾನಿಸಲಾಗಿದ್ದು, ಏಕಾಂಗಿಯಾಗಿ ಹೋರಾಟ ಮಾಡಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ನಿವಾಸದಲ್ಲಿ ಹಲ್ಲೆ ನಡೆದ ಒಂದು ದಿನದ ನಂತರ, ಮೇ 14 ರಂದು ಬಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಬಿಭವ್ ಕುಮಾರ್ ಕೂಡಾ ಪ್ರತಿ-ದೂರು ದಾಖಲಿಸಿದ್ದರು. ಸಿಎಂ ಸಿವಿಲ್ ಲೈನ್ಸ್ ನಿವಾಸದಲ್ಲಿ ಮಾತಿನಲ್ಲಿ ನಿಂದಿಸಿ, ಹಲ್ಲೆ ನಡೆಸಿರುವುದಾಗಿ ಮಲಿವಾಲ್ ಆರೋಪಿಸಿದ್ದರು.