ದೊಡ್ಡ ಎಡವಟ್ಟು ಮಾಡಿಕೊಂಡ ಚುನಾವಣಾ ಆಯೋಗ : ಏನದು ಮಹಾ ಯಡವಟ್ಟು …..?

ಬೆಂಗಳೂರು: 

     ರಾಜ್ಯ ಚುನಾವಣಾ ಆಯೋಗದ ಎಡವಟ್ಟಿನಿಂದಾಗಿ ಸಾವಿರಾರು ಸರ್ಕಾರಿ ಅಧಿಕಾರಿಗಳು ಮತದಾನದಿಂದ ವಂಚಿರಾಗುವಂತಾಗಿದೆ. ರಾಜ್ಯದಲ್ಲಿ 5,11,272 ಸರ್ಕಾರಿ ನೌಕರರಿದ್ದಾರೆ. ಶೇ.85 ಸಿಬ್ಬಂದಿಯನ್ನು ಚುನಾವಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಚುನಾವಣಾ ಕಾರ್ಯಗಳಿಗೆ ಸಂಬಂಧಪಟ್ಟಂತೆ ನಾಲ್ಕೈದು ದಿನ ತರಬೇತಿ ನೀಡಲಾಗುತ್ತದೆ.

    ತರಬೇತಿ ವೇಳೆ ಅಂಚೆ ಮತದಾನ ಮಾಡುವುದಕ್ಕಾಗಿ ಅಧಿಕಾರಿಗಳು, ಫಾರಂ-12 ಅರ್ಜಿ ಭರ್ತಿ ಮಾಡಿ ರಿಟರ್ನಿಂಗ್​ ಅಫೀಸರ್​ಗೆ ಸಲ್ಲಿಸುತ್ತಾರೆ. ಫಾರಂನಲ್ಲಿ ಉಲ್ಲೇಖಿಸಿರುವ ವಿಳಾಸಕ್ಕೆ ಅಂಚೆ ಮತಪತ್ರ ಕಳುಹಿಸಬೇಕು. ಅದನ್ನು ಪಡೆದು ಅಧಿಕಾರಿಗಳು ಅಂಚೆ ಮತದಾನ ಮಾಡುತ್ತಾರೆ. ಆದರೆ, ಮೊದಲ ಹಂತದ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇದೆ. ಹೀಗಿರುವಾಗ, ಸರ್ಕಾರಿ ಸಿಬ್ಬಂದಿಗೆ ಅಂಚೆ ಮತದಾನ ಮಾಡುವ ಅವಕಾಶ ದೊರೆತಿಲ್ಲ.ಅಧಿಕಾರಿಗಳು ಕೊಟ್ಟಿರುವ ವಿಳಾಸಕ್ಕೆ ಈವರೆಗೆ ಅಂಚೆ ಮತಪತ್ರ ತಲುಪಿಲ್ಲ. ಕೆಲಸ ಮಾಡುತ್ತಿರುವ ಸ್ಥಳಕ್ಕೆ ಖುದ್ದಾಗಿ ಮತಪತ್ರ ಕಳುಹಿಸುವುದಾಗಿ ಆಯೋಗ ಹೇಳಿದ್ದರೂ ಕಳುಹಿಸಿಲ್ಲ.

    ಕೊಟ್ಟಿರುವ ವಿಳಾಸಕ್ಕೆ ಮತಪತ್ರ ಕಳುಹಿಸಬೇಕಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಏಕಾಏಕಿ ನಿಯಮ ಬದಲಾಯಿಸಲಾಗಿದೆ. ಕೊಟ್ಟಿರುವ ವಿಳಾಸಕ್ಕೆ ಪೋಸ್ಟಲ್​ ಬ್ಯಾಲೆಟ್​ ಕಳುಹಿಸಿಲ್ಲ. ಕೆಲಸ ಮಾಡುತ್ತಿರುವ ಸ್ಥಳಕ್ಕೆ ಕಳುಹಿಸುವುದಾಗಿ ಹೇಳುತ್ತಿದ್ದರೂ ಈವರೆಗೆ ತಲುಪಿಲ್ಲ.

    ಆಯೋಗದ ಗೊಂದಲದಿಂದ ಅಧಿಕಾರಿಗಳು ಮತದಾನ ಮಾಡಲು ಹರಸಾಹಸಪಡುವಂತಾಗಿದೆ. ಕೆಲವರು ಅಂಚೆ ಮತಪತ್ರಕ್ಕಾಗಿ ಊರಿಗೆ ತೆರಳಿ ಬೇಸರದಿಂದ ವಾಪಸ್​ ಬರುವಂತಾಗಿದೆ. ಕೊಟ್ಟಿರುವ ವಿಳಾಸಕ್ಕೆ ಕಳುಹಿಸುವ ಬದಲು ‘ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ’ ಎಂದು ಆಯೋಗ ಹೇಳುತ್ತಿದೆ. ಎಲ್ಲ ಅಧಿಕಾರಿಗಳು ಒಂದೇ ಕಡೆ ಬರುವಂತೆ ಹೇಳುತ್ತಿದ್ದಾರೆ. ಚುನಾವಣಾ ಕಾರ್ಯದೊತ್ತಡದಿಂದ ಬಳಲುತ್ತಿರುವ ಅಧಿಕಾರಿಗಳು ಅಂಚೆ ಮತಪತ್ರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. ಈ ಬಗ್ಗೆ ಮೇಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎಂದು ದೂರಿದ್ದಾರೆ.

    ಅಂಚೆ ಮತಪತ್ರ ಸಮಸ್ಯೆಯನ್ನು ಆಯೋಗ ತಕ್ಷಣ ಬಗೆಹರಿಸದಿದ್ದರೆ ಸಾವಿರಾರು ನೌಕರರು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ಹೀಗಾಗಿ, ತಕ್ಷಣವೇ ಸಮಸ್ಯೆ ಬಗೆಹರಿಸಿ ನೌಕರರಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ