ಬೆಳಗಾವಿ
ನರ್ಸಿಂಗ್ ವಿದ್ಯಾರ್ಥಿನಿಯ ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದೆ. “ನಾನು ಸ್ವ ಇಚ್ಛೆಯಿಂದ ಹೋಗಿರುವೆ, ನನ್ನನ್ನು ಯಾರು ಅಪಹರಿಸಲಿಲ್ಲ. ಸದ್ರುದ್ದಿನ್ ಬೇಪಾರಿ ಮತ್ತು ನಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ನನ್ನ ತಾಯಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ನಾನು ಸದ್ರುದ್ದಿನ್ ಬೇಪಾರಿ ಜೊತೆಗೆ ಹೋಗಿದ್ದೆ ಎಂದು ರಾಧಿಕಾ ಮುಚ್ಚಂಡಿ ಬೆಳಗಾವಿ ಗ್ರಾಮಾಂತರ ಪೊಲೀಸರ ಮುಂದೆ ಹೇಳಿದ್ದಾರೆ. ಇಬ್ಬರ ಹೇಳಿಕೆಯನ್ನು ಪಡೆದು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ನಿವಾಸಿಯಾಗಿರುವ 19 ವರ್ಷದ ರಾಧಿಕಾ ಮುಚ್ಚಂಡಿ ನರ್ಸಿಂಗ್ ಕೋರ್ಸ್ ಓದುತ್ತಿದ್ದಳು. ಫೆಬ್ರವರಿ 19ರಂದು ಮನೆಯಿಂದ ಹೊರ ಹೋದ ರಾಧಿಕಾ ವಾಪಸ್ ಬಂದಿರಲಿಲ್ಲ. ಮಗಳಿಗಾಗಿ ತಾಯಿ ಎಷ್ಟೇ ಹುಡುಕಾಟ ನಡೆಸಿದರೂ ರಾಧಿಕಾ ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಗೆ ರಾಧಿಕಾ ತಾಯಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸದ್ರುದ್ದಿನ್ ಬೇಪಾರಿ ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ರಾಧಿಕಾಗಾಗಿ ಹುಡುಕಾಟ ನಡೆಸಿದರು. ರಾಧಿಕಾ ಮತ್ತು ಸದ್ರುದ್ದಿನ್ ಬೇಪಾರಿ ಓಡಿ ಹೋಗಿ ಮುಂಬೈನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರಿಗೆ ಗೊತ್ತಾಗುತ್ತೆ. ಬೆಳಗಾವಿ ಪೊಲೀಸರು ಮುಂಬೈಗೆ ತೆರಳಿ ಇಬ್ಬರನ್ನೂ ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲಿ ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡು ವಾಪಸ್ ಕಳುಹಿಸಿದ್ದಾರೆ.
