ಬೆಂಗಳೂರು:
ಬಿಪರ್ಜಾಯ್ ಚಂಡಮಾರುತ ಈಗಾಗಲೇ ಗುಜರಾತ್ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು, ರಾಜಸ್ಥಾನದತ್ತ ಮುನ್ನುಗ್ಗುತ್ತಿದೆ. ಗುರುವಾರ ತಡರಾತ್ರಿ ಗುಜರಾತ್ನ ಜಖೌ ಕರಾವಳಿ ಪ್ರದೇಶದಕ್ಕೆ ಅಪ್ಪಳಿಸಿದ ಚಂಡಮಾರುತ ಭಾರಿ ಮಳೆ, ಬಿರುಗಾಳಿಗೆ ಕಾರಣವಾಗಿದೆ.ಈಗಾಗಲೇ ಗುಜರಾತ್ನ ಕಛ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ಭೋರ್ಗರೆಯುತ್ತಿದೆ.
ಪಾಕಿಸ್ತಾನದ ಕರಾಚಿ ಮತ್ತಿತರ ಪ್ರದೇಶಗಳ ಮೇಲೆ ಹಾದು ಮತ್ತೆ ಭಾರತವನ್ನು ಪ್ರವೇಶಿಸಲಿರುವ ಬಿಪರ್ಜಾಯ್ ರಾಜಸ್ಥಾನದ ಮೇಲೆ ಚಲಿಸಲಿದೆ.ಈಗಾಗಲೇ ರಾಜಸ್ಥಾನದ ಬಾರ್ಮೆರ್, ಜಾಲೋರ್, ಜೈಸಲ್ಮೇರ್, ಸಿರೋಹಿ, ಜೋಧ್ಪುರ, ಪಾಲಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರಬಲ ಚಂಡಮಾರುತವಾಗಿ ಗುಜರಾತ್ಗೆ ಅಪ್ಪಳಿಸಿದ್ದ ಬಿಪರ್ ಜಾಯ್ ಶುಕ್ರವಾರ ಸಂಜೆ ವೇಳೆಗೆ ರಾಜಸ್ಥಾನವನ್ನು ಪ್ರವೇಶಿಸಲಿದೆ.
ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಕಾರಣ ಜೋಧ್ಪುರ ವಿಶ್ವವಿದ್ಯಾನಿಲಯ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದೆ. ಬಾರ್ಮೆರ್-ಜೋಧ್ಪುರ ನಡುವೆ ಸಂಚರಿಸಬೇಕಿದ್ದ ಪ್ಯಾಸೆಂಜರ್ ರೈಲುಗಳನ್ನು ಎರಡು ದಿನ ರದ್ದು ಮಾಡಲಾಗಿದೆ. ಬಾರ್ಮೆರ್ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಸಂಜೆ ವೇಳೆಗೆ 20 ಮಿಮೀ ಮಳೆ ದಾಖಲಾಗಿದೆ. ಈಗಾಗಲೇ ಜೈಸಲ್ಮೇರ್ ಜಿಲ್ಲೆಯ ಡಬ್ಲಾ ಗ್ರಾಮದಿಂದ 450 ಜನರನ್ನು ಸ್ಥಳಾಂತರ ಮಾಡಲಾಗಿದೆ.
ನಿಜವಾಗುತ್ತಾ ಕೋಡಿ ಮಠ ಶ್ರೀಗಳ ಭವಿಷ್ಯ
ಮುಂಗಾರು ಆರಂಭದಲ್ಲೇ ಭಾರತಕ್ಕೆ ಚಂಡಮಾರುತದ ಅಪಾಯ ಎದುರಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ದುರ್ಬಲವಾಗಿದ್ದು, ಮಳೆ ತಡವಾಗುತ್ತಿದೆ. ಒಂದು ಕಡೆ ಪ್ರವಾಹದ ಭೀತಿ ಎದುರಾಗಿದ್ದರೆ, ಇನ್ನೊಂದು ಕಡೆ ಬರದ ಛಾಯೆ ಆವರಿಸಿದೆ, ಇದೆಲ್ಲವನ್ನೂ ನೋಡಿದಾಗ ಕೆಲವು ದಿನಗಳ ಹಿಂದೆ ಕೋಡಿ ಮಠ ಶ್ರೀಗಳು ಹೇಳಿದ್ದ ಭವಿಷ್ಯ ನಿಜವಾಗುವ ಮುನ್ಸೂಚನೆಯಾ ಎನಿಸುತ್ತದೆ.
ಇತ್ತೀಚೆಗೆ ತಾನೆ ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ದೇಶದಲ್ಲಿ ಅವಘಡ ನಡೆಯುತ್ತದೆ ಎಂದು ಹೇಳಿದ್ದೆ ಅದರಂತೆ ಒಡಿಶಾ ರೈಲುದುರಂತ ನಡೆದಿದೆ, ಭಾರತಕ್ಕೆ ಇನ್ನೂ ದೊಡ್ಡ ಗಂಡಾಂತರ ಕಾದಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದರು.
ಈ ಬಾರಿ ಗುಡುಗು, ಮಿಂಚು ಆರ್ಭಟ ಹೆಚ್ಚಾಗಲಿದೆ. ಎರಡರಿಂದ ಮೂರು ದೇಶಗಳಲ್ಲಿ ಪ್ರವಾಹದಲ್ಲಿ ಮುಳುಗಡೆಯಾಗಲಿವೆ, ಎಲ್ಲೋ ನಡೆಯುವ ಬಾಂಬ್ ದಾಳಿಯಿಂದ ಭಾರತಕ್ಕೆ ತೊಂದರೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಈ ಬಾರಿ ಮಳೆ ಕಡಿಮೆಯಾದರೂ, ಗುಡುಗು ಮಿಂಚು ಆರ್ಭಟ ಜೋರಾಗಿದೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದು, ಕರ್ನಾಟಕದಲ್ಲಿ ಬರದ ಆತಂಕ ಆವರಿಸಿದೆ, ಎಲ್ಲಾ ಜಲಾಶಯಗಳಲ್ಲಿ ನೀರು ತಳ ಸೇರಿದ್ದು ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/06/bipar.jpg)