ದಲಿತರ ದುಡ್ಡು ತಿಂದ ತಿಮಿಂಗಿಲಗಳಿಗೆ ಶಿಕ್ಷೆ ಆಗುವವರೆಗೂ ನಾವು ಸುಮ್ಮನಿರುವುದಿಲ್ಲ; BJP

ಬೆಂಗಳೂರು:

   ಎಸ್ಐಟಿ ಹೆಸರಿನಲ್ಲಿ ಈ ಪ್ರಕರಣವನ್ನ ಮುಚ್ಚಿಹಾಕುವ ನಿಮ್ಮ ಹುನ್ನಾರ ಫಲಿಸುವುದಿಲ್ಲ. ಸತ್ಯ ಹೊರಬರುವರೆಗೂ, ದಲಿತರ ದುಡ್ಡು ತಿಂದ ತಿಮಿಂಗಿಲಗಳಿಗೆ ಶಿಕ್ಷೆ ಆಗುವವರೆಗೂ ನಾವು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ಗುರುವಾರ ಹೇಳಿದೆ.

   ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ನವರೇ, ಆರೋಪಿಗಳು ಎಸ್ಐಟಿ ವಿಚಾರಣೆಗೆ ಗೈರಾಗುತ್ತಿರುವುದು ಯಾಕೆ?. ವಿಚಾರಣೆಗೆ ಹಾಜರಾದರೆ ನಿಮ್ಮ ಹೆಸರು ಬಾಯಿ ಬಿಡುತ್ತಾರೆ ಎನ್ನುವ ಭಯವೇ? ಎಂದು ಪ್ರಶ್ನಿಸಿದ್ದಾರೆ

   4,000 ಕೋಟಿ ರೂ. ಮೌಲ್ಯದ ಮುಡಾ ಭೂಹಗರಣ ತಮ್ಮ ಕುತ್ತಿಗೆಗೆ ಬರುತ್ತಿದ್ದಂತೆ ಗಲಿಬಿಲಿಗೊಂಡಿರುವ ಸಿಎಂ ಸಿದ್ದರಾಮಯ್ಯನವರು ಹೇಗಾದರೂ ಮಾಡಿ ಸಾಕ್ಷಿ ನಾಶ ಮಾಡಬೇಕು ಎಂಬ ಸಂಚು ಹೂಡಿ ಕಡತಗಳನ್ನ ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿದ್ದರಾಮಯ್ಯನವರೇ, ತಮ್ಮ ಡೋಂಗಿ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ತಮ್ಮ ಭ್ರಷ್ಟಾಚಾರದ ಕರ್ಮಕಾಂಡ ಬಟಾ ಬಯಲಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಕಡತಗಳನ್ನ ನಾಶ ಮಾಡಬಹುದು, ಆದರೆ ಸತ್ಯವನ್ನು ಎಂದಿಗೂ ನಾಶ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ