ಬೆಂಗಳೂರು:
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ 250 ಕೋಟಿ ರು. ಮೌಲ್ಯದ ಹಗರಣದ ಬಗ್ಗೆ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಶೇ.40 ಭ್ರಷ್ಟಾಚಾರ ನಡೆಸುವ ಮೂಲಕ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರರಾಗಿರುವ ಬಿಜೆಪಿಯವರು ಜನರ ಹಣ ಹಾಗೂ ಜೀವನವನ್ನೂ ನುಂಗುತ್ತಿದ್ದಾರೆ. ಇದೀಗ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶಾಲಾ ಕಿಟ್ಗಳಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. 3,6560 ರು. ಮೌಲ್ಯದ ಕಿಟ್ಗೆ 9 ಸಾವಿರ ರು. ಬಿಲ್ ಮಾಡಿದ್ದಾರೆ. ಈ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ದಾಖಲೆಗಳು ನೀಡಲು ಸಿದ್ಧವಿದ್ದೇವೆ. ಅವರಿಗೆ ನೈತಿಕತೆ ಇದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.
6 ರಿಂದ 8 ನೇ ತರಗತಿ ಮಕ್ಕಳಿಗೆ ಒಂದು ಕಿಟ್, 1 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಿಟ್ ನೀಡಲಾಗುತ್ತಿದೆ. ಇದರಲ್ಲಿ 5ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯಾಗಿ ನೀಡಿ ಬಳಿಕ ಉಳಿದರೆ 4,3,2,1 ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದಿದ್ದಾರೆ. ಸರ್ಕಾರದ ಬಳಿ ಯಾವ ತರಗತಿಯಲ್ಲಿ ಎಷ್ಟುಜನ ನೋಂದಾಯಿತ ಕಾರ್ಮಿಕರ ಮಕ್ಕಳಿದ್ದಾರೆ ಎಂಬ ಅಂಕಿ-ಅಂಶ ಇಲ್ಲವೇ? ಸಮೀಕ್ಷೆ ನಡೆಸದೇ ಏಕಾಏಕಿ ಟೆಂಡರ್ ನಡೆಸಿದ್ದೇಕೆ? ಎಂದು ಪ್ರಶ್ನಿಸಿಸಿದರು.
