ಬೆಂಗಳೂರು:
ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಲವು ಸಭೆಗಳನ್ನು ನಡೆಸುತ್ತಿದ್ದು ಈ ವೇಳೆ ಮಾಜಿ ಪೊಲೀಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರು ಪಕ್ಷವು ಮುಸ್ಲಿಮರನ್ನು ಜೊತೆಗೆ ಕರೆದೊಯ್ಯಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಪೊಲೀಸ್ ಕಮಿಷನರ್ ಅವರ ಅಭಿಪ್ರಾಯವು ಬಿಜೆಪಿ ಅಳವಡಿಸಿಕೊಂಡಿರುವ ಧ್ರುವೀಕರಣದ ಕಾರ್ಯಸೂಚಿಗೆ ತೀವ್ರ ವ್ಯತಿರಿಕ್ತವಾಗಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಹೆಚ್ಚಿನ ಬಿಜೆಪಿ ನಾಯಕರು ಅನುದಾನದಂತಹ ಸಣ್ಣ ಪುಟ್ಟ ವಿಷಯಗಳು, ವರ್ಗಾವಣೆ ಕೋರಿಕೆಗಳ ಬಗ್ಗೆ ಮಾತ್ರ ಸಭೆಯಲ್ಲಿ ಮಾತನಾಡಿದ್ದಾರೆ.
ಆದರೆ ಭಾಸ್ಕರ್ ರಾವ್ ಅವರು ನಿಲುವು ವಿಭಿನ್ನವಾಗಿದೆ. ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿರುವ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಸ್ಕರ್ ರಾವ್ ನೀಡಿದ ಕೆಲವು ಸಲಹೆಗಳನ್ನು ಟಿಪ್ಪಣಿ ಮಾಡುತ್ತಿದ್ದರು.
ಚುನಾವಣಾ ಸೋಲಿನ ಆತ್ಮಾವಲೋಕನ ಮತ್ತು ಸಾರ್ವತ್ರಿಕ ಚುನಾವಣೆಗೆ ಸಲಹೆಗಳನ್ನು ನೀಡಲು ಪಕ್ಷವು ನಡೆಸಿದ ಸಭೆಯಲ್ಲಿ ಅವರ ಹೇಳಿಕೆ ಹೊರಬಿದ್ದಿದೆ. ಸರ್ವಜ್ಞನಗರ, ಪುಲಕೇಶಿನಗರ, ಶಿವಾಜಿನಗರ, ಬಿಟಿಎಂ ಲೇಔಟ್, ಶಾಂತಿನಗರ ಮತ್ತು ಗಾಂಧಿನಗರದಂತಹ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಗಳನ್ನು ಕಿತ್ತೊಗೆಯಲು ವಿಶೇಷ ಕಾರ್ಯನಿರ್ವಹಣೆಯೊಂದಿಗೆ ಪಕ್ಷಕ್ಕೆ ವಿಶೇಷ ಪ್ರಧಾನ ಕಾರ್ಯದರ್ಶಿ ಮಟ್ಟದ ಪದಾಧಿಕಾರಿ ಇರಬೇಕು ಎಂದು ರಾವ್ ಸಲಹೆ ನೀಡಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯರ್ತರು ಇದ್ದರೂ, ಪಕ್ಷದ ಮತಗಳಿಕೆಯನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದರು.
ಸಿಎಎ-ಎನ್ಆರ್ಸಿ ಪ್ರತಿಭಟನೆಗಳು ನಡೆಯುತ್ತಿರುವಾಗ, ಯಾರಿಗೂ ಗಾಯವಾಗದಂತೆ ನೋಡಿಕೊಳ್ಳಲು ಸಿಎಂ ಯಡಿಯೂರಪ್ಪ ಅವರಿಗೆ (ರಾವ್) ಸೂಚನೆ ನೀಡಿದ್ದರು ಎಂದು ರಾವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಬಿಜೆಪಿಯಲ್ಲಿ ಇದು ಹೊಸ ಪರಿಭಾಷೆಯಾಗಿ ಕಂಡುಬರುತ್ತದೆ ಏಕೆಂದರೆ , ಟೀಕಾಕಾರರು ಯಾವಾಗಲೂ ಪಕ್ಷವು “ಕೋಮುವಾದ ಮತ್ತು ದ್ವೇಷದ ಅಜೆಂಡಾವನ್ನು” ಅನುಸರಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೇಸರಿ ಪಾಳಯದಲ್ಲಿ ಭಾಸ್ಕರ್ ರಾವ್ ಮತ್ತು ಯಡಿಯೂರಪ್ಪ ಒಂದು ತುದಿಯಲ್ಲಿದ್ದಾರೆ, ಬಹಿಷ್ಕಾರಗಳು ಮತ್ತು ನಿಷೇಧ ಮತ್ತು ಗುಂಪು ಹತ್ಯೆ ಬಗ್ಗೆ ಕಟು ಟೀಕೆ ಮಾಡುವವರು ಇನ್ನೊಂದು ತುದಿಯಲ್ಲಿದ್ದಾರೆ. ಲೋಕಸಭೆ ಚುನಾವಣೆ ಸಿದ್ಧತೆ ಮಾಡುತ್ತಿರುವ ಬಿಜೆಪಿ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಅಜೆಂಡಾ ಒಳಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ