ಮುಖ್ಯಮಂತ್ರಿ ಹೇಳಿಕೆಗೆ ಖಂಡನೆ

ತುರುವೇಕೆರೆ:

        ರಾಜ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್ ಸ್ವಾಮಿ ಜನರು ದಂಗೆ ಹೇಳಲಿದ್ದಾರೆ ಎಂಬ ಪ್ರಚೋದನಾಕಾರಿ ಹೇಳಿಕೆ ಹಾಗೂ ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಾಂಗ್ರೇಸ್ ಗೂಂಡಾಗಳು ದಾಳಿ ಮಾಡಲು ಮುಂದಾಗಿದ್ದನ್ನು ಖಂಡಿಸಿ ಶುಕ್ರವಾರ ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದುಂಡಾರೇಣಕಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನೆಡೆಸಿದರು.

      ಪಟ್ಟಣದ ಬಿಜೆಪಿ ಕಚೇರಿಯಿಂದ ಹೊರಟ ನೂರಾರು ಬಿಜೆಪಿ ಕಾರ್ಯಕರ್ತರು ಬಾಣಸಂದ್ರ ವೃತ್ತದವರೆಗೆ ಮೆರವಣಿಗೆ ನೆಡೆಸಿ ಮುಖ್ಯಮಂತ್ರಿ ಗುಂಡಾವರ್ತನೆ ಹಾಗೂ ರಾಜ್ಯ ಸರ್ಕಾರದ ದುರಾಡಳಿತವನ್ನು ಖಂಡಿಸಿ ರಾಜ್ಯ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ರಸ್ತೆಯಲ್ಲಿ ಪ್ರತಿಭಟನೆ ನೆಡೆಸಿದರು.

      ಬಿಜೆಪಿ ತಾಲೂಕು ಅಧ್ಯಕ್ಷ ದುಂಡಾರೇಣಕಪ್ಪ ಮಾತನಾಡಿ ರಾಜ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿರವರು ದಂಗೆ ಎಂಬ ಪದ ಬಳಕೆ ಮಾಡಿ ಹೇಳಿಕೆಗಳನ್ನು ನೀಡಿ ಜನರನ್ನು ಬಿಜೆಪಿ ವಿರುದ್ದ ಪ್ರಚೋದನೆ ನೀಡುತ್ತಿದ್ದಾರೆ. ರಾಜ್ಯ ಮುಖ್ಯಮಂತ್ರಿಗಳು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೂಡಲೇ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಹಾಗೂ ಪೊಲೀಸ್ ಇಲಾಖೆ ಬಿ.ಎಸ್.ಯಡಿಯೂರಪ್ಪರವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

      ಎಪಿಎಂಸಿ ಸದಸ್ಯ ವಿ.ಟಿ.ವಂಕಟರಾಮಯ್ಯ, ನಿವೃತ್ತ ಬಿಇಒ ಸೋಮಶೇಖರಯ್ಯ ಮುಖಂಡರಾದ ಅರಳಿಕೆರೆಶಿವಯ್ಯ, ಡಿ.ಆರ್.ಬಸವರಾಜು , ಜಗದೀಶ್ ಮಾತನಾಡಿ ರಾಜ್ಯಕ್ಕೆ ಶಾಂತಿ ಬಯಸಬೇಕಾದ ಒಬ್ಬ ನಾಡಿನ ಮುಖ್ಯಮಂತ್ರಿ ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು ಈ ಕೂಡಲೇ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಉಘ್ರ ಹೋರಾಟ ನಡೆಸಲಾಗುವುದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

       ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ನವೀನ್ ಭಾಬು, ಹೇಮಚಂದ್ರು, ಬಸವಣ್ಣ, ಶಿವಲಿಂಗಪ್ಪ, ರಾಮೇಗೌಡ, ರಾಮಣ್ಣ, ಪ್ರಕಾಶ್, ಚಿದಾನಂದ್, ಜಯಶೀಲಾ, ಅನಿತಾ, ಉಮಾರಾಜ್, ಮಲ್ಲೇಶ್, ಕಾಳಂಜಿಹಳ್ಳಿ ಸೋಮಣ್ಣ, ಕುಮಾರ್, ಹೊನ್ನಪ್ಪ, ಜಗದೀಶ್, ಶಿವಬಸವಯ್ಯ, ಶೇಖರ್ ಸೇರಿದಂತೆ ಇತರರು ಇದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link