ಬೆಂಗಳೂರು
ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯ ಫಲಿತಾಂಶ ಮೇ 13ರಂದು ಹೊರಬರಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ, ಆಡಳಿತಾರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ.
‘ರಮೇಶ್ ಜಾರಕಿಹೊಳಿ ಬಿಜೆಪಿಗೆ ದುಬಾರಿ ಮನುಷ್ಯನಾಗಿದ್ದಾರೆ, ಒಂದೆಡೆ ಸವದಿ ಜೊತೆ ಕಿರಿಕ್, ಇನ್ನೊಂದೆಡೆ ಈರಣ್ಣ ಕಡಾಡಿ ಜೊತೆ ಕಿರಿಕ್. ಬಹುಶಃ ಚುನಾವಣೆ ಮುಗಿದರೂ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ನಿರ್ಧಾರವಾಗುವುದು ಅನುಮಾನ. ನಾಯಕತ್ವವೇ ಇಲ್ಲದ ಬಿಜೆಪಿಯಲ್ಲಿ ಎಲ್ಲರೂ ನಾನೇ ನಾಯಕ ಎಂದು ಹೊರಟಿದ್ದಾರೆ. ಒಳಜಗಳವೇ ಬಿಜೆಪಿಯನ್ನ ಮುಗಿಸಲಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಬಿಜೆಪಿಯ ಬಹುತೇಕ ಶಾಸಕರಿಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಬಂಡಾಯವೆದ್ದಿದ್ದಾರೆ. ಇದು ಸರ್ಕಾರದ ದುರಾಡಳಿತದ ಪರಿಣಾಮವೋ, ಶಾಸಕರ ವೈಫಲ್ಯದ ಕಾರಣವೋ ಬಿಜೆಪಿ? 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಬಿಜೆಪಿ ಅತೀ ಹೀನಾಯ ಆಡಳಿತ ನೀಡಿದೆ ಎನ್ನಲು ಬಿಜೆಪಿ ಕಾರ್ಯಕರ್ತರ ಬಂಡಾಯವೇ ಸಾಕ್ಷಿ ಹೇಳುತ್ತಿದೆ’ ಎಂದು ಕೆಪಿಸಿಸಿ ಟೀಕಿಸಿದೆ.
ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಬಸವ ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ. BSY ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ’ ಎಂದು ಕಾಂಗ್ರೆಸ್ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/Untitled-3-25.jpg)