ಬೆಂಗಳೂರು:
ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗಿದ್ದಾರೆ. ಇಂದು ಬಿಎಂಟಿಸಿಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದೆ. ಕನಕಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸೊಂದು ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದಕ್ಕೆ ಗುದ್ದಿ ಅದರ ಮೇಲೆ ಹರಿದುಹೋದ ಕಾರಣ ಪಿಲಿಯನ್ ರೈಡರ್ ಆಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ವಾಹನ ಓಡಿಸುತ್ತಿದ್ದ ಅವರ ಅಳಿಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ
ಕಳೆದ ಶುಕ್ರವಾರವಷ್ಟೇ ಪೀಣ್ಯದ ಎರಡನೇ ಹಂತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಐವರ ಮೇಲೆ ಚಾಲಕ ಬಿಎಂಟಿಸಿ ಬಸ್ ಹತ್ತಿಸಿದ್ದ ಪರಿಣಾಮ 25 ವರ್ಷದ ಸುಮ ಎನ್ನುವ ಮಹಿಳೆ ಸಾವನಪ್ಪಿದ್ದರು. ಇಂದು ಬೆಂಗಳೂರಿನ ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಆತನನ್ನು ಶಿಫ್ಟ್ ಮಾಡಲಾಗಿದೆ. ಕೆಆರ್ ಮಾರ್ಕೆಟ್ನಿಂದ ಹಂಚಿಪುರ ಕಾಲೋನಿಗೆ ತೆರಳುತ್ತಿದ್ದ KA 01 F 4168 ಸಂಖ್ಯೆಯ ಬಿಎಂಟಿಸಿ ಬಸ್ನಿಂದ ಈ ಅಪಘಾತ ಸಂಭವಿಸಿದೆ.