ದುಬೈ:
ಹಿಂದಿ ಬಿಗ್ಬಾಸ್ ಸೀಸನ್ 19ರ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಜೊತೆ ಭಾಗವಹಿಸುವ ಕುರಿತು ಮಾಜಿ ಹಿಂದಿ ಬಿಗ್ ಬಾಸ್ ಸ್ಪರ್ಧಿ ಸೂಪರ್ ಸ್ಟಾರ್ ಪವನ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಪವನ್ ಸಿಂಗ್ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬಂದಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಹಾಗೂ ಸಲ್ಮಾನ್ ಖಾನ್ ಜೊತೆ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಪವನ್ ಸಿಂಗ್ ಮುಂಬೈ ಪೋಲಿಸರಿಗೆ ದೂರು ನೀಡಿದ್ದಾರೆ. ಈ ಕುರಿತಾಗಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮುಂಬೈ ಪೋಲಿಸರು ಅಪರಾಧ ವಿಭಾಗದ ಸುಲಿಗೆ ವಿರೋಧಿ ನಿಯಮದಡಿಯಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಬಿಗ್ಬಾಸ್ ಸೀಸನ್ 19ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಹಿಂದಿ ಬಿಗ್ಬಾಸ್ ನಿರೂಪಕ ಹಾಗೂ ನಟ ಸಲ್ಮಾನ್ ಖಾನ್ ಅವರ ಜೊತೆ ಭಾಗವಹಿಸುವುದಾಗಿ ಪವನ್ ಸಿಂಗ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಭಾಯಿಜಾನ್ ಕೆ ಸಾಥ್ ಬಿಗ್ ಬಾಸ್ 19 ಕೆ ಗ್ರಾಂಡ್ ಫಿನಾಲೆ ಮೇ ಹಮಾರೆ ಸಾಥ್ ಜುಡೆಂಗೆ” ಎಂದು ಬರೆದುಕೊಂಡಿದ್ದರು. ಮರುದಿನ ಅವರಿಗೆ ಕೆಲ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದಿವೆ ಎನ್ನಲಾಗಿದೆ. ಬಳಿಕ ಅವರು ಸಲ್ಮಾನ್ ಖಾನ್ ಮತ್ತು ಮಾಜಿ ಸ್ಪರ್ಧಿ ನೀಲಂ ಗಿರಿ ಅವರೊಂದಿಗೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಕರೆ ಮಾಡಿದವರಲ್ಲಿ ಒಬ್ಬರು ನಾನು ಬಿಷ್ಣೋಯ್ ಗ್ಯಾಂಗ್ ಸದಸ್ಯ ಎಂದು ಹೇಳಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಬೆದರಿಕೆ ಕರೆಗಳು ಬಂದ ಕೂಡಲೆ ಸುರಕ್ಷತೆಯ ದೃಷ್ಟಿಯಿಂದ ಎಚ್ಛೆತ್ತುಕೊಂಡ ಪವನ್ ಸಿಂಗ್ ಮುಂಬೈ ಪೋಲಿಸ್ ಠಾಣೆಯಲ್ಲಿ ಎರಡು ದೂರು ಕೊಟ್ಟಿದ್ದಾರೆ. ಮಾಹಿತಿಯ ಪ್ರಕಾರ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ. ಇನ್ನು ದೂರು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿರುವ ಪೋಲಿಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದ್ದಾರೆ.
ಕುಖ್ಯಾತ ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಸದ್ಯ ಜೈಲು ಅತಿಥಿಯಾಗಿದ್ದಾನೆ. ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸ್ ಮತ್ತು ಮಾದಕವಸ್ತು ಸಾಗಾಣಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಷ್ಣೋಯ್ ಸಬರಮತಿ ಜೈಲಿನಲ್ಲಿದ್ದಾನೆ. ಇತ್ತೀಚಿಗೆ ನಡೆದ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಕೈವಾಡವಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.








