ಬೆಂಗಳೂರು
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬದಲಾಗಿ ವಿಕಸಿತ್ ಭಾರತ್ -ಗ್ಯಾರಂಟಿ ಫಾರ್ ರೋಜ್ಗಾರ್ & ಆಜೀವಿಕ ಮಿಷನ್ ಕಾಯ್ದೆ 2025 ಜಾರಿಗೊಳಿಸಿರುವ ಕೇಂದ್ರದ ಕ್ರಮವನ್ನು ಕರ್ನಾಟಕ ಕ್ಯಾಬಿನೆಟ್ ತೀವ್ರವಾಗಿ ಖಂಡಿಸಿದೆ. ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಅಧಿಕಾರ ವಿಕೇಂದ್ರೀಕರಣ, ಗ್ರಾಮಗಳಿಗೆ ಅಭಿವೃದ್ಧಿ ತಲುಪಿಸುವ ಅಧಿಕಾರವನ್ನು ಗ್ರಾಮಪಂಚಾಯತಿಗಳಿಗೆ ನೀಡಲಾಗಿದ್ದ ಎಲ್ಲ ರಚನಾತ್ಮಕ, ಸಕಾರಾತ್ಮಕ, ಸ್ವರಾಜ್ಯದ ಪರಿಕಲ್ಪನೆಯನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಯೋಜನೆ ರದ್ಧತಿ ಕುರಿತು ವಿವರವಾದ ಪತ್ರಿಕಾಗೋಷ್ಠಿಯನ್ನು ಮುಖ್ಯಮಂತ್ರಿಗಳು ನಾಳೆ ಕೈಗೊಳ್ಳಲಿದ್ದಾರೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ RoP ಯಡಿ ವಿವಿಧ ಐಇಸಿ/ ಎಸ್ ಬಿಸಿಸಿ ಕಾರ್ಯಚಟುವಟಿಕೆಗಳ ರೂ. 41.80 ಕೋಟಿಗಳ ಸಮಗ್ರ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ 100 ಹಾಸಿಗೆಗಳ ಹೊಸ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯನ್ನು ರೂ. 40.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.ಬೆಂಗಳೂರು ಉಪನಗರ ಸಾರಿಗೆ ಯೋಜನೆಯ (BSTP) ಕಾರಿಡಾರ್ 2 ಮತ್ತು 4ರ ಪರಿಷ್ಕೃತ ಅಂದಾಜು ವೆಚ್ಚ ರೂ.16876.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಜ್ಯದ ಆಯ್ದ (2023-24) ಆರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (DIET) ರಚನಾತ್ಮಕ ವಿನ್ಯಾಸವನ್ನು ಉನ್ನತೀಕರಿಸಿ ಉತ್ಕೃಷ್ಟ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET for Excellence) ಗಳನ್ನಾಗಿ( ಬೀದರ್, ಬಳ್ಳಾರಿ, ಚಿತ್ರದುರ್ಗ, ಮೈಸೂರು,ಶಿವಮೊಗ್ಗ,ಮಂಡ್ಯ) ಪರಿವರ್ತಿಸುವ ರೂ.36.90 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನಿರ್ಣಯಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿಗೆ (CCSR Policy) ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ಯಲಹಂಕ ಮಾದಪ್ಪನಹಳ್ಳಿ ಕಾಯ್ದಿಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ (ಒಟ್ಟು 153 ಎಕರೆ 39 ಗುಂಟೆ) “ವಿಶ್ವಗುರು ಬಸವಣ್ಣ ಜೀವ ವೈವಿಧ್ಯ ಬೃಹತ್ ಉದ್ಯಾನವನ” ಎಂಬ ಹೆಸರಿನ ಉದ್ಯಾನವನವನ್ನು ರೂ. 50.29 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಸಂಸ್ಥೆಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು ಎಲ್ಲಾ ಅಂಗಾಂಗ ಕಸಿಗಳನ್ನು ಒಳಗೊಂಡಂತೆ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆಯನ್ನು ನಿರ್ಮಾಣ ಮಾಡುವುದಕ್ಕಾಗಿ ಅಜೀಮ್ ಪ್ರೇಮ್ಜಿ ಫೌಂಡೇಷನ್ ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಹಾಗೂ ಸದರಿ ಸಂಸ್ಥೆಯೊಂದಿಗೆ MoU ಮಾಡಿಕೊಳ್ಳಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಛೇರಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ “ಕಾಂಗ್ರೆಸ್ ಭವನ ಟ್ರಸ್ಟ್ (ರಿ), ಬೆಂಗಳೂರು” ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಶೇಖರೋಜಾ ಸರ್ವೆ ನಂ. 111/2ರಲ್ಲಿನ 2338.91 ಚ.ಮೀ. ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನ ಪಿ.ಎಲ್-01ನ್ನು ಶಿಕ್ಷಕರ ಭವನ ನಿರ್ಮಿಸಲು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ಜಿಲ್ಲಾ ಸಂಘ, ಕಲಬುರಗಿ ಇವರಿಗೆ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ.
2025-26ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ 41685 ಪೀಠೋಪಕರಣಗಳನ್ನು ಕೆಎಸ್ಎಫ್ ಐಸಿಯಿಂದ ನೇರ ಖರೀದಿಯ ಮೂಲಕ ಅಂದಾಜು ರೂ.864.74 ಲಕ್ಷ ವೆಚ್ಚದಲ್ಲಿ ಮತ್ತು ಅಲ್ಪಾವಧಿಯ ಟೆಂಡರ್ ಮೂಲಕ ಅಂದಾಜು ರೂ.2667.42 ಲಕ್ಷ ವೆಚ್ಚದಲ್ಲಿ (ಒಟ್ಟು ರೂ.35.32 ಕೋಟಿಗಳು) ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
100 ಪಶುವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ರೂ. 50.00 ಕೋಟಿಗಳ ಅಂದಾಜು ವೆಚ್ಚದಲ್ಲಿ ನಬಾರ್ಡ್ ಅನುದಾನದೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.ಐಐಟಿ ಹೈದರಾಬಾದ್ ಸಹಯೋಗದೊಂದಿಗೆ ಹೊಸ “ಕರ್ನಾಟಕ ಜಿಎಸ್ ಟಿ ಅನಲೈಟಿಕ್ಸ್ ಪೋರ್ಟಲ್ ನ್ನು ರೂ. 19.00 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಕಾರ್ಯಗತಗೊಳಿಸಲು ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ.








