ಶಿರಾ:
ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ಹೀಗೆ…ಆರಂಭದಲ್ಲಿ ಶೂರತ್ವ ಕಂಡು ಅಬ್ಬರದ ಪ್ರಚಾರದ ಭರಾಟೆ ನಡೆಸುತ್ತಾರಲ್ಲದೆ ಮತದಾರರ ಮನವೊಲಿಸಲು ತೀವ್ರವಾದ ಕಸರತ್ತು ಕೂಡಾ ನಡೆಸುವುದು ಅನಿವಾರ್ಯವಾಗುತ್ತದೆ.
ಜಾತಿಗಳ ವಿಷಬೀಜ ಬಿತ್ತುವುದರಿಂದಾ ಹಿಡಿದು ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುವ ತಂತ್ರಗಾರಿಕೆಯನ್ನು ಹೆಣೆಯುವುದರಲ್ಲೂ ನಿಸ್ಸೀಮರಾದ ಕೆಲ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಬೆಂಬಲಿಗರು ರಾಜಕೀಯ ತಂತ್ರ ಹೆಣೆಯುವುದನ್ನು ಕರಗತ ಮಾಡಿಕೊಂಡಿರುತ್ತಾರೆ.
ಇಂತಹ ಹಿನ್ನೆಲೆಯಲ್ಲಿಯೂ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪೈಕಿ ಕಳೆದ ಕೆಲ ದಿನಗಳ ಹಿಂದಷ್ಟೆ ನಡೆದ ಶಿರಾ ನಗರಸಭೆಯ ಚುನಾವಣೆಯೂ ಹೊರತೇನಲ್ಲ.
ಕಳೆದ 10 ವರ್ಷಗಳ ಹಿಂದೆ ನಡೆದ ನಗರಸಭೆಯ ಚುನಾವಣೆಯ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯ ವ್ಯಕ್ತಿತ್ವ, ಕಾರ್ಯ ಸಾಧನೆ ಹಾಗೂ ಗುಣವಂತಿಕೆಯನ್ನು ನೋಡಿ ಮತ ಚಲಾವಣೆ ಮಾಡಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಮತದಾರರನ್ನೂ ಭ್ರಷ್ಠರನ್ನಾಗಿಸುವ ಇಂದಿನ ರಾಜಕೀಯ ವ್ಯವಸ್ಥೆ ನಿನ್ನೆಯಷ್ಟೇ ನಡೆದ ನಗರಸಭೆಯ ಚುನಾವಣೆಯಲ್ಲೂ ಮೇಳೈಸಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಹಾಲಿ ಇರುವ ಇಲ್ಲಿನ ನಗರಸಭೆಯ 31 ವಾರ್ಡುಗಳ ಪೈಕಿ 30 ವಾರ್ಡ್ಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷವು 11 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 7 ಸ್ಥಾನಗಳನ್ನು ಪಡೆದ ಜೆ.ಡಿ.ಎಸ್. ಪಕ್ಷ ಕೊನೆಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿ.ಜೆ.ಪಿ. ಕೇವಲ 4 ಸ್ಥಾನಗಳನ್ನು ಪಡೆಯುವ ಮೂಲಕ ತನ್ನ ಮರ್ಯಾದೆ ಉಳಿಸಿಕೊಂಡಿದೆ.
ಕಳೆದ ನಗರಸಭಾ ಚುನಾವಣೆಯಲ್ಲಿ ಸ್ಪಷ್ಠ ಬಹುಮತ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಕೇವಲ 11 ಸ್ಥಾನಗಳನ್ನು ಪಡೆದಿದ್ದು ಇದೀಗ ಅಧಿಕಾರದ ಗದ್ದುಗೆ ಹಿಡಿಯಲು ಕಸರತ್ತು ನಡೆಸುವುದು ಅನಿವಾರ್ಯವೂ ಆಗಿದೆ.
ಯಾವುದೇ ಪಕ್ಷವು ಸ್ಪಷ್ಠ ಬಹುಮತ ಪಡೆಯದ ಪರಿಣಾಮ 8 ವಾರ್ಡ್ಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಗೊಂಡಿರುವ ಅಭ್ಯರ್ಥಿಗಳನ್ನು ಬರ ಸೆಳೆದುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿದೆ.
ಅಳತೆಗೋಲನ್ನಿಟ್ಟುಕೊಂಡು ಟಿಕೇಟ್ ಹಂಚಿಕೆ ಮಾಡಿದ್ದರೆ ಕಾಂಗ್ರೆಸ್ಗೆ ಸ್ಪಷ್ಠ ಬಹುಮತ ಲಭ್ಯವಾಗುವುದು ಖಚಿತವಾಗಿದ್ದರೂ ಟಿಕೇಟ್ ಲಭ್ಯವಾಗದ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಗೊಂಡ ಪರಿಣಾಮ ಇವರನ್ನು ಅಪ್ಪಿಕೊಂಡು ಸಾಗುವ ಕೆಲಸ ಎಷ್ಟರಮಟ್ಟಿಗೆ ನಡೆಯುವುದೋ ಕಾದು ನೋಡಬೇಕಿದೆ.
ಕಳೆದ ಬಾರಿ ಕಾಂಗ್ರೆಸ್ ಪಕ್ಷ ಸ್ಪಷ್ಠ ಬಹುಮತ ಪಡೆದಿದ್ದರೂ ಪ್ರಸಕ್ತ ಚುನಾವಣೆಯಲ್ಲಿ ಬಹುಮತದ ಹಿನ್ನಡೆಯಾಗಲು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತವೂ ಕಾರಣವಾಯಿತು.
ಒಂದೇ ಪಕ್ಷದಲ್ಲಿದ್ದುಕೊಂಡಿದ್ದ ಅಪ್ಪ-ಮಕ್ಕಳು ಬೇರೆ ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸಿಕೊಂಡು ಪ್ರಚಾರ ಮಾಡಿಕೊಂಡಿದ್ದರಲ್ಲದೆ ಕಾಂಗ್ರೆಸ್ ಪಕ್ಷದ ಅನೇಕ ಅಭ್ಯರ್ಥಿಗಳು ಸೋಲಿನ ರುಚಿ ನೋಡಲು ಕಾರಣಕರ್ತರಾದರು.
ಒಂದೇ ಕುಟುಂಬದ ಅನೇಕ ಮಂದಿ ವಿವಿಧ ವಾರ್ಡುಗಳ ಎರಡು ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪ್ರಚಾರದಲ್ಲಿ ತೊಡಗಿದ ಪರಿಣಾಮ ವಿವಿಧ ಪಕ್ಷಗಳಿಗೆ ಸ್ಪಷ್ಠ ಬಹುಮತ ಲಭ್ಯವಾಗದಿರಲು ಕಾರಣವಾಗಿ ಅತಂತ್ರ ಸ್ಥಿತಿಯ ನಗರಸಭೆಗೆ ಕಾರಣವೂ ಆಯಿತು.
ಸ್ಪರ್ಧಾ ಕಣದಲ್ಲಿದ್ದು ಗೆಲ್ಲಲೇ ಬೇಕೆಂಬ ಹಠದಿಂದ ಭರಾಟೆಯ ಪ್ರಚಾರ ಮಾಡಿ ಪರಾಜಯಗೊಂಡವರು ಹಾಗೂ ಕಷ್ಟದ ಸ್ಥಿತಿಯಲ್ಲೂ ಜಯ ಗಳಿಸಿದವರು ತಮ್ಮ ತಮ್ಮ ಸೋಲು-ಗೆಲುವಿನ ಲೆಕ್ಕಾಚಾರಗಳನ್ನು ಹಾಕಿಕೊಂಡು ಕುಳಿತಿದ್ದಾರೆ.
ಹಣ, ಹೆಂಡವನ್ನು ಸುರಿದು, ಮನೆ ಮನೆಗೂ ನೋಟಿನ ಕಂತೆಗಳನ್ನೇ ಹಂಚಿಕೆ ಮಾಡಿದ್ದಲ್ಲದೆ, ಚಿನ್ನ-ಬೆಳ್ಳಿಯ ಉಡುಗೊರೆಗಳನ್ನು ನೀಡಿದ್ದರೂ ಪರಾಜಯಗೊಂಡವರು ಕಾರಣಗಳನ್ನು ಹುಡುಕಿಕೊಂಡು ಕುಳಿತುಕೊಳ್ಳುವುದು ಅನಿವಾರ್ಯವೂ ಆಗಿದೆ.
ಹಣ, ಹೆಂಡದ ಅಮಿಷ ತೋರಿಸಿದರೂ ಎಲ್ಲಿ ಸೋತುಬಿಡುತ್ತೇವೆಯೋ ಎಂಬ ಭೀತಿಯಿಂದ ಅನೇಕ ಅಭ್ಯರ್ಥಿಗಳು ಗೆಲ್ಲುವ ಕುದುರೆಯ ಅಭ್ಯರ್ಥಿಯನ್ನು ಹಿಮ್ಮೆಟ್ಟಿಸಲು ಚುನಾವಣೆಯಲ್ಲಿ ರಣ ತಂತ್ರಗಳನ್ನೇ ರೂಪಿಸಿದ್ದು ಅಚ್ಚರಿಯ ಸಂಗತಿಯೂ ಆಗಿತ್ತು.
ಅಭ್ಯರ್ಥಿಗಳ ವಿರುದ್ಧ ಕೆಟ್ಟದಾಗಿ ಕರ ಪತ್ರ ಹಂಚುವುದರಿಂದಾ ಹಿಡಿದು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತುವಂತಹ ಕೆಲಸಗಳನ್ನೂ ಕೆಲ ಕಿಡಿಗೇಡಿಗಳು ಮಾಡಿದ್ದು ಅನೇಕ ಪ್ರಜ್ಞಾವಂತ ಅಭ್ಯರ್ಥಿಗಳಿಗೂ ಸೋಲಿನ ಅನುಭವವಾಗಲು ಕಾರಣವಾಯಿತು.
ದಿನ ನಿತ್ಯವೂ ಬಿರಿಯಾನಿ, ಬಾಡೂಟ, ಹಣ, ಹೆಂಡದ ಹೊಳೆಯೇ ಹರಿಸಲಾಯಿತಲ್ಲದೇ ಮತದಾರರನ್ನೂ ಅಮಿಷಕ್ಕೊಳಪಡಿಸುವುದು ಕೆಲ ಅಭ್ಯರ್ಥಿಗಳಿಗೆ ಅನಿವಾರ್ಯವಾಗಿತ್ತು.
ಗೆಲ್ಲಬೇಕೆಂಬ ಹಠದಿಂದ ಆರ್ಥಿಕವಾಗಿ ದುರ್ಬಲವಿದ್ದ ಅಭ್ಯರ್ಥಿಗಳು ಕೂಡಾ ಸಾಲ ಮಾಡಿ ಹಣ ತಂದು ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಈ ಚುನಾವಣೆಯ ಮತ್ತೊಂದು ಮುಖವಾಗಿತ್ತು.
ಒಟ್ಟಾರೆ ಅತಂತ್ರ ಸ್ಥಿತಿಯಲ್ಲಿರುವ ನಗರಸಭೆಯ ಗದ್ದುಗೆ ಹಿಡಿಯಲು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷವಷ್ಟೇ ಅಲ್ಲದೆ ಬಿ.ಜೆ.ಪಿ. ಕೂಡಾ ಯಮ ಯತ್ನ ಮಾಡಬೇಕಿದ್ದು ಸ್ವತಂತ್ರ ಅಭ್ಯರ್ಥಿಗಳತ್ತ ಎಲ್ಲರ ಚಿತ್ತ ಹೆಣೆದು ಕೂತಿದೆ.
ಕಳೆದ ಬಾರಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಠ ಬಹುಮತ ಪಡೆದಿದ್ದರೂ ಪ್ರಸಕ್ತ ಚುನಾವಣೆಯಲ್ಲಿ ಬಹುಮತದ ಹಿನ್ನಡೆಯಾಗಲು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತವೂ ಕಾರಣವಾಯಿತು.
ಒಂದೇ ಪಕ್ಷದಲ್ಲಿದ್ದುಕೊಂಡಿದ್ದ ಅಪ್ಪ-ಮಕ್ಕಳು ಬೇರೆ ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸಿಕೊಂಡು ಪ್ರಚಾರ ಮಾಡಿಕೊಂಡಿದ್ದರಲ್ಲದೆ ಕಾಂಗ್ರೆಸ್ ಪಕ್ಷದ ಅನೇಕ ಅಭ್ಯರ್ಥಿಗಳು ಸೋಲಿನ ರುಚಿ ನೋಡಲು ಕೆಲ ತಂದೆ ಮಕ್ಕಳೇ ಕಾರಣಕರ್ತರಾದರು.
ಒಂದೇ ಕುಟುಂಬದ ಅನೇಕ ಮಂದಿ ವಿವಿಧ ವಾರ್ಡುಗಳ ಎರಡು ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪ್ರಚಾರದಲ್ಲಿ ತೊಡಗಿದ ಪರಿಣಾಮ ವಿವಿಧ ಪಕ್ಷಗಳಿಗೆ ಸ್ಪಷ್ಠ ಬಹುಮತ ಲಭ್ಯವಾಗದಿರಲು ಕಾರಣವಾಗಿ ಅತಂತ್ರ ಸ್ಥಿತಿಯ ನಗರಸಭೆಗೆ ಕಾರಣವೂ ಆಯಿತು.
– ಬರಗೂರು ವಿರೂಪಾಕ್ಷ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
