ಹಾಸನ
ರಾಜ್ಯದಲ್ಲಿ ಮಳೆಯ ಅವಾಂತರ ಪರಿಣಾಮ ಇನ್ನಿಬ್ಬರು ಬಲಿಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಚಾಲಕನಿಗೆ ರಸ್ತೆ ಕಾಣದೇ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಸನ ತಾಲೂಕಿನ ಬಾಗೇ ಸಮೀಪ ಅರಸು ನಗರದಲ್ಲಿ ಮಳೆಯ ಕಾರಣ ಚಾಲಕನಿಗೆ ರಸ್ತೆ ಕಾಣದೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ಮೂಲದ ಶರತ್ (28), ಅಭಿಷೇಕ್ (27) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಟ್ರಾವೆಲ್ಸ್ ಒಂದರ ಮೂಲಕ ಬಾಡಿಗೆ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಭಾರಿ ಮಳೆಯ ಕಾರಣ ಚಾಲಕನಿಗೆ ರಸ್ತೆ ಕಾಣದೆ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಪೊಲೀಸರು ಎಚ್ಚರಿಕೆ ಸೂಚನೆಗಳನ್ನು ನೀಡಿದ್ದಾರೆ. ಮಳೆ ಹಾಗೂ ಮೋಡ ಕವಿದ ವಾತಾವರಣದ ಪರಿಣಾಮ ರಸ್ತೆಗಳಲ್ಲಿ ಗೋಚರತೆ ಕಡಿಮೆಯಾಗಿದೆ. ಹೀಗಾಗಿ ಎಚ್ಚರದಿಂದ ವಾಹನಗಳನ್ನು ಚಲಾಯಿಸಬೇಕು. ಹೆದ್ದಾರಿಗಳಲ್ಲಿ ಅತಿ ವೇಗ ಹಾಗೂ ಅಜಾಗರೂಕತೆ ಬೇಡ. ವೇಗಕ್ಕಿಂತ ಸುರಕ್ಷತೆ ಮುಖ್ಯ ಎಂಬುದು ನೆನಪಿನಲ್ಲಿರಲಿ. ಜೋರು ಮಳೆ ಬರುತ್ತಿದ್ದರೆ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಿ. ಘಾಟಿ ರಸ್ತೆಗಳಲ್ಲಿ ವೇಗವಾಗಿ ಚಲಾಯಿಸಬಾರದು. ಭೂಕುಸಿತದ ಸಂಭವವೂ ಇರುವುದರಿಂದ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದ್ದಾರೆ.
